
Appeal to Revenue Minister | ಡಿಸಿ ಮನ್ನಾ ಜಮೀನು ಅರ್ಹ ದಲಿತರಿಗೆ ಹಂಚಿ: ಕಂದಾಯ ಸಚಿವರಿಗೆ ಡಿಎಸ್ಎಸ್ ಆಗ್ರಹ
ದಲಿತ ಸಮುದಾಯಕ್ಕೆ ಮೀಸಲಿಟ್ಟ DC ಮನ್ನಾ ಜಮೀನನ್ನು ಅರ್ಹ ದಲಿತರಿಗೆ ಹಂಚಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)(ಅಂಬೇಡ್ಕರ್ ವಾದ)ದ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ರಾಜ್ಯ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬ್ರಿಟಿಷ್ ಸರ್ಕಾರ 1932 ರಿಂದ 1939 ರ ಅವಧಿಯಲ್ಲಿ ದಲಿತ ಸಮುದಾಯಕ್ಕೆ ಮೀಸಲಿಟ್ಟ ಡಿಸಿ ಮನ್ನಾ ಜಮೀನು ಇಂದಿಗೂ ಹಂಚಿಕೆಯಾಗದಿರುವುದು ದುರಂತ. ಜಾತಿ ತಾರತಮ್ಯಗೊಳಗಾಗಿರುವ ದಲಿತರು ತುಂಡು ಭೂಮಿಗಾಗಿ ಸ್ವಾತಂತ್ರ್ಯ ಭಾರತದಲ್ಲಿ ಹೋರಾಟದ ಹಾದಿ ಹಿಡಿದರೂ ಯಾವುದೇ ಸರ್ಕಾರಗಳು ಮೌನಕ್ಕೆ ಶರಣಾಗಿರುವುದು ಸರಿಯಲ್ಲ. ದಲಿತರಿಗೆ ಮೀಸಲಿಟ್ಟ ಜಮೀನುಗಳನ್ನು ಶ್ರೀಮಂತ ವರ್ಗದವರು , ಸವರ್ಣಿಯರು ಒತ್ತುವರಿ ಮಾಡಿದರೂ ಕಂದಾಯ ಇಲಾಖೆ ಇಂದಿಗೂ ತೆರವುಗೊಳಿಸಿರುವುದಿಲ್ಲ. ಬೆಳ್ತಂಗಡಿ ತಾಲೂಕಿನಲ್ಲಿ ಸಾವಿರಾರು ಎಕರೆ ಡಿಸಿ ಮನ್ನಾ ಜಮೀನು ಇದ್ದರೂ ಇಂದಿಗೂ ತುಂಡು ಜಮೀನಿಗಾಗಿ ದಲಿತರು ಕಂದಾಯ ಇಲಾಖೆ ಕಛೇರಿ ಅಳೆಯುವುದು ತಪ್ಪಿಲ್ಲ. ಆದುದರಿಂದ ದ.ಕ ಜಿಲ್ಲೆಯಾದ್ಯಂತ ಇರುವ ಡಿಸಿ ಮನ್ನಾ ಜಮೀನನ್ನು ದಲಿತರಿಗೆ ಹಂಚಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದ ತಾಲೂಕು ಸಂಚಾಲಕ ನೇಮಿರಾಜ್ ಕಿಲ್ಲೂರು ,ತಾಲೂಕು ಸಂಘಟನಾ ಸಂಚಾಲಕ ವೆಂಕಣ್ಣ ಕೊಯ್ಯುರು ತಾಲೂಕು ಖಜಾಂಚಿ ಬಿ.ಕೆ ಶೇಖರ್ ಕಣಿಯೂರು,ಹರೀಶ್ ಲಾಯಿಲ ಸೇರಿದಂತೆ ನಾಯಕರು ಉಪಸ್ಥಿತರಿದ್ದರು.