
Ramesh Jarakiholi- ಸ್ವಪಕ್ಷೀಯರ ಮೇಲೆಯೇ ಸಿಡಿಸಿದೆದ್ದ ರಮೇಶ್ ಜಾರಕಿಹೊಳಿ: ದಿಲ್ಲಿ ಭೇಟಿ ಬಳಿಕ ವಿಡಿಯೋ ರಿಲೀಸ್?
ಬೆಂಗಳೂರು: ಸಿಡಿ ಪ್ರಕರಣದಿಂದಾಗಿ ಹೈರಾಣಾಗಿ ಹೋದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜಕೀಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಸಿಡಿ ಪ್ರಕರಣದ ಬಳಿಕ ಹೊಡೆತಗಳ ಮೇಲೆ ಹೊಡೆತಗಳನ್ನು ತಿಂದು ರಾಜಕೀಯವಾಗಿ ಹಿನ್ನಡೆ ಕಂಡಿರುವ ರಮೇಶ್ ಜಾರಕಿಹೊಳಿ, ಇದೀಗ ತಮ್ಮ ವಿರುದ್ಧದ ಷಡ್ಯಂತ್ರ ಹೆಣೆದಿರುವ ಈ ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.
ದೆಹಲಿಗೆ ಇತ್ತೀಚೆಗಷ್ಟೆ ಮುಂಬೈಗೆ ಭೇಟಿ ನೀಡಿದ್ದ ಅವರು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ದೆಹಲಿಗೆ ದಿಢೀರ್ ಆಗಿ ಭೇಟಿ ನೀಡಿರುವ ರಮೇಶ್ ಜಾರಕಿಹೊಳಿ, ತನ್ನ ವಿರುದ್ಧ ಯಾರು ಸಂಚು ಮಾಡಿದ್ದಾರೆ ಎಂಬ ಬಗ್ಗೆ ಮಾತನಾಡಿದ್ದಾರೆ.
ಸ್ವಪಕ್ಷದವರೇ ತನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮತ್ತು ಪಿತೂರಿ ಮಾಡಿದ್ದಾರೆ ಎಂದು ಅವರು ಕೆಂಡ ಕಾರಿದ್ದಾರೆ. ತನ್ನ ಜೊತೆಯಲ್ಲಿ ಇದ್ದುಕೊಂಡೇ ಬಿಜೆಪಿ ಮೂವರು ಷಡ್ಯಂತ್ರ ನಡೆಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದು, ಶೀಘ್ರದಲ್ಲೇ ಅವರ ಮುಖವಾಡವನ್ನು ಬಯಲು ಮಾಡುವುದಾಗಿ ಹೇಳಿದ್ಧಾರೆ.
ದೆಹಲಿಯಲ್ಲಿ ತಾನು ಯಾರನ್ನು ಭೇಟಿಯಾಗುತ್ತೇನೆ ಎನ್ನುವುದನ್ನು ಬಹಿರಂಗ ಪಡಿಸುವುದಿಲ್ಲ. ಆದರೆ ತಾನು ವರಿಷ್ಟ ನಾಯಕರನ್ನು ಭೇಟಿಯಾದ ಬಳಿ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ರಾಜಕೀಯವಾಗಿ ಬಾಂಬ್ ಸಿಡಿಸಿದ್ದಾರೆ.
ತಾನು ಬಿಡುಗಡೆ ಮಾಡಲಿರುವ ಈ ವಿಡಿಯೋ ನೀವು ನೋಡಿದರೆ, ಎಲ್ಲರೂ ಶಾಕ್ ಆಗ್ತೀರಿ ಎಂದು ರಮೇಶ್ ಜಾರಕಿಹೊಳಿ ಸ್ವಪಕ್ಷೀಯರ ವಿರುದ್ಧವೇ ಹೊಸ ಬಾಂಬ್ ಸಿಡಿಸಿದ್ದಾರೆ.