
Bantwal youth died- ಸ್ನಾನ ಮಾಡಲು ಬಾತ್ ರೂಂಗೆ ಹೋದಾತ ಗಂಟೆಯಾದ್ರೂ ಬರಲಿಲ್ಲ: ಬಾಗಿಲು ತೆರೆದಾಗ ಕಾದಿತ್ತು ಶಾಕ್!
ಗ್ಯಾಸ್ ಗೀಜರ್ ಆನ್ ಮಾಡಿ ಬಿಸಿ ನೀರು ಸ್ನಾನ ಮಾಡುತ್ತಿದ್ದ ಯುವಕ ಬಾತ್ ರೂಮ್ ನಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಮಾರಿಪಳ್ಳದಲ್ಲಿ ನಡೆದಿದೆ.
23 ವರ್ಷ ವಯಸ್ಸಿನ ಇಜಾಜ್ ಅಹ್ಮದ್ ಮೃತಪಟ್ಟ ಯುವಕ. ಸೋಮವಾರ ಸಂಜೆ ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಝ್ ಗ್ಯಾಸ್ ಗೀಜರ್ ಆನ್ ಮಾಡಿ ಬಾತ್ ರೂಂನಲ್ಲಿ ಸ್ನಾನ ಮಾಡಲು ಹೊರಟಿದ್ದ. ಆದರೆ, ಸ್ನಾನಕ್ಕೆ ಹೋದವನು ಗಂಟೆಯಾದರೂ ಹೊರಬಾರದಿದ್ದಾಗ ಮನೆಯವರು ಆತನನ್ನು ಕರೆದಿದ್ದಾರೆ.
ಮನೆಯವರು ಎಷ್ಟೇ ಕರೆದರೂ ಆತನಿಂದ ಪ್ರತಿಕ್ರಿಯೆ ಬಾರದೇ ಇದ್ದಾಗ ಗಾಬರಿಯಿಂದ ಬಾಗಿಲು ಒಡೆದಿದ್ದಾರೆ. ಈ ವೇಳೆ ಇಜಾಜ್ ಅಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿ ಬಿದ್ದಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಾಣ ಉಳಿಸುವ ಪ್ರಯತ್ನ ವಿಫಲವಾಯಿತು.
ಗ್ಯಾಸ್ ಗೀಜರ್ನಲ್ಲಿ ನೀರು ಬಿಸಿ ಮಾಡುವ ವೇಳೆಯಲ್ಲಿ ಗೀಜರ್ನಿಂದ ಹೊರಬರುವ ಕಾರ್ಬನ್ ಮೋನಾಕ್ಸೈಡ್ ದೇಹದೊಳಗೆ ಸೇರಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.