
ನೋಟು ರದ್ದತಿ ಅರಿವಿಲ್ಲದೆ ಹಳೆಯ ನೋಟುಗಳ 65 ಸಾವಿರ ರೂ. ಸಂಗ್ರಹಿಸಿದ ಅಂಧ ಭಿಕ್ಷುಕ: ವಿನಿಮಯ ಮಾಡಲು ಕೋರಿ ಮನವಿ
Wednesday, October 20, 2021
ಚೆನ್ನೈ: ತಮಿಳುನಾಡಿನ 65 ವರ್ಷ ವಯಸ್ಸಿನ ಅಂಧ, ಭಿಕ್ಷುಕರೋರ್ವರಿಗೆ ತಮ್ಮಲ್ಲಿರುವ 65 ಸಾವಿರ ರೂ. ಮೊತ್ತದ ರದ್ದಾಗಿರುವ 500 ರೂ., 1000 ರೂ. ಮುಖಬೆಲೆಯ ಹಳೆಯ ನೋಟುಗಳನ್ನು ವಿನಿಮಯ ಮಾಡಬೇಕೆಂದು ಕೋರಿ ಕೃಷ್ಣಗಿರಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.
ಚಿನ್ನಕಣ್ಣು ಎಂಬ ಈ ಅಂಧ ಭಿಕ್ಷುಕ ಕೃಷ್ಣಗಿರಿ ಜಿಲ್ಲೆಯ ಚಿನ್ನಗೌಂಡನೂರು ಗ್ರಾಮದವರು. ಚಿನ್ನಕಣ್ಣು ತಮ್ಮ ಐದನೇ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡಿದ್ದರು. ಇವರು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಾ ಹಳ್ಳಿಯ ಗುಡಿಸಲೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಈ ವ್ಯಕ್ತಿಯು ನಿತ್ಯವೂ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ಭಿಕ್ಷೆ ಬೇಡಿ ಗಳಿಸಿ ಉಳಿತಾಯ ಮಾಡಿರುವ ಹಣ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ವಿವರಿಸಿರುವ ಚಿನ್ನಕಣ್ಣು, "ನಾನು ಕಳೆದ ನಾಲ್ಕು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದೆ. ಆದ್ದರಿಂದ ನನಗೆ ನನ್ನ ಜೀವಿತಾವಧಿಯಲ್ಲಿ ಉಳಿತಾಯ ಮಾಡಿರುವ 65 ಸಾವಿರ ರೂ. ಹಣವನ್ನು ಎಲ್ಲಿ ಇರಿಸಿದ್ದೆ ಎಂಬುದನ್ನೇ ಮರೆತ್ತಿದ್ದೆ. ಕೆಲವು ದಿನಗಳ ಹಿಂದೆ ಈ ಹಣ ನನಗೆ ಸಿಕ್ಕಿದೆ. ನೋಟು ರದ್ದತಿ ಆಗಿರುವುದರಿಂದ ತನ್ನ ಜೀವಿತಾವಧಿಯ ಉಳಿತಾಯ ಮೊತ್ತವನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ ಎಂದು ಬಳಿಕ ತಿಳಿದುಕೊಂಡೆ. ನನ್ನ ವೃದ್ಧಾಪ್ಯದಲ್ಲಿ ಈ ಹಣವನ್ನು ಬಳಸುವ ಭರವಸೆಯೊಂದಿಗೆ ಅದನ್ನು ಉಳಿತಾಯ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.