
MANGALORE: ಮಂಗಳೂರಿನಲ್ಲಿ ಬಿಜೆಪಿ ಪ್ರಮುಖನ ಕೊಲೆಗೆ ಯತ್ನ- ತಲವಾರು ದಾಳಿ ಮಾಡಲು ಬಂದ ದುಷ್ಕರ್ಮಿಗಳು- ಸಾವಿನಿಂದ ಎಸ್ಕೇಪ್ ಆಗಿದ್ದು ಹೀಗೆ....
Tuesday, October 19, 2021
ಮಂಗಳೂರು: ಬೈಕ್ ನಲ್ಲಿ ಹೊಂಚು ಹಾಕುತ್ತಿದ್ದ ಮೂವರು ಅಪರಿಚಿತರು ಮಂಗಳೂರಿನ ಬಿಜೆಪಿ ಪ್ರಮುಖನ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೈಯಲು ಯತ್ನಿಸಿರುವ ಘಟನೆ ನಿನ್ನೆ ರಾತ್ರಿ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಹಾಸ್ಟೆಲ್ ಬಳಿ ನಡೆದಿದೆ.
ಕೊಣಾಜೆ ಗ್ರಾಪಂ ಮಾಜಿ ಸದಸ್ಯ ಬಿಜೆಪಿ ಪ್ರಮುಖ ಪ್ರಕಾಶ್ ಶೆಟ್ಟಿ(41) ಎಂಬವರ ಮೇಲೆ ತಲವಾರು ದಾಳಿ ನಡೆದಿದ್ದು, ಸಮಯಪ್ರಜ್ಞೆಯಿಂದ ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ನಗರದ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಹಾಸ್ಟೆಲ್ ಬಳಿಯ ದುರ್ಗಾ ಫ್ಯಾನ್ಸಿ & ಜನರಲ್ ಸ್ಟೋರ್ ನ ಮಾಲಕರಾಗಿರುವ ಪ್ರಕಾಶ್ ನಿನ್ನೆ ರಾತ್ರಿ 9.30ಕ್ಕೆ ತಮ್ಮ ಮಳಿಗೆಯನ್ನು ಮುಚ್ಚಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭ ಪ್ರಕಾಶ್ ಶೆಟ್ಟಿಯವರು ತಮ್ಮ ಫ್ಯಾನ್ಸಿ ಮಳಿಗೆಯ ಅನತಿ ದೂರದಲ್ಲಿ ಕಪ್ಪು ಪಲ್ಸರ್ ಬೈಕಿನಲ್ಲಿ ಕುಳಿತಿದ್ದ ಮೂವರು ಯುವಕರನ್ನು ಗಮನಿಸಿದ್ದರು. ಈ ಬಗ್ಗೆ ಹೆಚ್ಚಿನ ಗಮನ ಕೊಡದೆ ಅವರು ಫ್ಯಾನ್ಸಿಯನ್ನು ಬಂದ್ ಮಾಡಿ ತಮ್ಮ ಪರಿಚಯದ ಮಂಜುನಾಥ್ ಎಂಬವರ ಬೈಕ್ ಏರಿ ಹೊರಟಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ಬೈಕ್ ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ಪ್ರಕಾಶ ಅವರನ್ನು ಗುರಿಯಾಗಿಸಿ ತಲವಾರು ಬೀಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅಪಾಯದ ಮುನ್ಸೂಚನೆ ಅರಿತ ಪ್ರಕಾಶ್ ಶೆಟ್ಟಿಯವರು ತಲವಾರು ಏಟನ್ನು ತಪ್ಪಿಸಲು ಯತ್ನಿಸಿದ್ದಾರೆ. ಆಗ ಅವರು ಕುಳಿತಿದ್ದ ಬೈಕ್ ಉರುಳಿ ಬಿದ್ದಿದೆ. ತಕ್ಷಣ ಬೈಕ್ ಚಾಲಕ ಮಂಜುನಾಥ್ ಹಾಗೂ ಪ್ರಕಾಶ್ ಹತ್ತಿರದ ಜನ ವಸತಿ ಪ್ರದೇಶಕ್ಕೆ ಓಡಿ ಬಚಾವಾಗಿದ್ದಾರೆ. ಪ್ರಕಾಶ್ ಬಲ ಕೈಗೆ ತಲವಾರಿನ ಏಟು ತಗಲಿದ್ದು ಈ ಬಗ್ಗೆ ಅವರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.