
ಓರ್ವಳಿಗಾಗಿ ಇಬ್ಬರ ನಡುವೆ ಕಾದಾಟ: ಓರ್ವನಿಗೆ ಇರಿದು ಗಾಯ
Friday, October 22, 2021
ಬೆಂಗಳೂರು: ಓರ್ವಳಿಗಾಗಿ ಇಬ್ಬರು ಯುವಕರ ನಡುವಿನ ಸಂಘರ್ಷದಿಂದ ಓರ್ವನು ಚೂರಿ ಇರಿತಗೊಂಡು ಗಾಯಾಳುವಾಗಿರುವ ಘಟನೆ ನಿನ್ನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚೂರಿಯಿಂದ ಇರಿದು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.
ಮುತ್ತುರಾಜ್ ಹಾಗೂ ಹೇಮಂತ್ ಬಂಧಿತ ಆರೋಪಿಗಳು. ಹರಿಕೀರ್ತನ್ ಎಂಬಾತ ಇರಿತಕ್ಕೊಳಗಾಗಿ ಗಾಯಗೊಂಡ ಯುವಕ.
ವಿದ್ಯಾರ್ಥಿಯಾಗಿದ್ದ ಹರಿಕೀರ್ತನ್ ಯುವತಿಯೋರ್ವಳನ್ನು ಪ್ರೇಮಿಸುತ್ತಿದ್ದ. ಮುತ್ತುರಾಜ್ ಕೂಡಾ ಅದೇ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಇದರಿಂದ ಮುತ್ತುರಾಜ್ ಗೆ ಹರಿಕೀರ್ತನ್ ನೊಂದಿಗೆ ದ್ವೇಷ ಬೆಳೆದಿತ್ತು. ಮುತ್ತುರಾಜ್ ಆ ಯುವತಿಯನ್ನು ಭೇಟಿ ಆಗಬಾರದೆಂದು ಹರಿಕೀರ್ತನ್ಗೆ ಎಚ್ಚರಿಕೆಯನ್ನೂ ನೀಡಿದ್ದ. ಆದರೆ ಅದನ್ನು ಲೆಕ್ಕಿಸದೆ ಹರಿಕೀರ್ತನ್ ಯುವತಿಯನ್ನು ಭೇಟಿಯಾಗುತ್ತಿದ್ದ.
ಇದರಿಂದ ಸಿಟ್ಟಿಗೆದ್ದ ಮುತ್ತುರಾಜ್ ತನ್ನ ಮಿತ್ರ ಹೇಮಂತ್ ಎಂಬಾತನೊಂದಿಗೆ ಸೇರಿ ಸುಂಕದಕಟ್ಟೆ ಬಳಿ ಬಸ್ವೊಂದನ್ನು ಅಡ್ಡಗಟ್ಟಿ ಹರಿಕೀರ್ತನ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ ಚೂರಿಯಿಂದ ಆತನ ಎದೆ ಮತ್ತಿತರ ಭಾಗಕ್ಕೆ ಇರಿದು ಪರಾರಿಯಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಗಾಯಾಳು ಹರಿಕೀರ್ತನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.