
ಪತಿ ಮೃತಪಟ್ಟ ಬೆನ್ನಲ್ಲೇ ಯುವಕನೊಂದಿಗೆ ಸರಸಸಲ್ಲಾಪದಲ್ಲಿ ಮೈಮರೆತ ಮಹಿಳೆ: ಆ ಮೇಲೆ ಬಯಲಾಯಿತು ಭಯಾನಕ ಸತ್ಯ
Friday, October 22, 2021
ಕಲಬುರಗಿ: ಅಪರಾಧ ಎಸಗಿದವರು ಏನು ಮಾಡಿ ಕಾನೂನಿನ ಕುಣಿಕೆಯಿಂದ ತಪ್ಪಿಸಲು ಯತ್ನಿಸಿದರೂ ಒಂದಲ್ಲ ಒಂದು ದಿನ ಅವರು ಸಿಕ್ಕಿಬೀಳಲೇ ಬೇಕು. ಈ ಮಾತಿಗೆ ಸರಿಯಾದ ನಿದರ್ಶನವೊಂದು ಈ ಘಟನೆಯ ಮೂಲಕ ಸಿಕ್ಕಂತಾಗಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಈರ್ನಾಪಲ್ಲಿಯಲ್ಲಿ ವ್ಯಕ್ತಿಯೋರ್ವನು ಮೃತಪಟ್ಟು ಎರಡು ತಿಂಗಳ ಬಳಿಕ ಆತನ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ. ಇಲ್ಲಿನ ರಾಜಪ್ಪರೆಡ್ಡಿ (38) ಎಂಬಾತ ಕಳೆದ ಆಗಸ್ಟ್ 24ರಂದು ಮೃತಪಟ್ಟಿದ್ದ. ಮದ್ಯವ್ಯಸನಿಯಾಗಿದ್ದ ಆತ ಕುಡಿದೇ ಮೃತಪಟ್ಟಿರುವನೆಂದು ಗ್ರಾಮಸ್ಥರು ನಂಬಿದ್ದರು. ಆತನ ಪತ್ನಿ ಅನಸೂಯಾ ಕೂಡ ಆತ ಮದ್ಯಸೇವನೆ ಮಾಡಿಯೇ ಮೃತಪಟ್ಟಿದ್ದ ಎಂದು ಎಲ್ಲರನ್ನು ನಂಬಿಸಿದ್ದಳು.
ಇದೀಗ ಆಕೆಯ ಕರಾಳ ಮುಖ ಬಯಲಾಗಿದೆ. ಪತಿ ಮೃತಪಟ್ಟಿದ್ದರೂ ಕಿಂಚಿತ್ತೂ ಕಣ್ಣೀರು ಸುರಿಸದ ಅನಸೂಯಾ ತನ್ನ ಪ್ರಿಯಕರನೊಂದಿಗೆ ಸರಸ ಸಲ್ಲಾಪ ಮುಂದುವರಿಸಿದ್ದಳು. ಇತ್ತೀಚೆಗೆ ಆಕೆ ಪ್ರಿಯಕರನೊಂದಿಗೆ ಸರಸವಾಡುತ್ತಿರುವಾಗಲೇ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಳು. ತಕ್ಷಣ ಗ್ರಾಮಸ್ಥರು ಪ್ರಿಯಕರನನ್ನು ಕಂಬಕ್ಕೆ ಕಟ್ಟಿ ಥಳಿಸಿದಾಗ ರಾಜಪ್ಪರೆಡ್ಡಿ ಸಾವಿನ ಅಸಲಿ ಕಥೆಯನ್ನು ಪ್ರಿಯಕರ ಬಿಚ್ಚಿಟ್ಟಿದ್ದಾನೆ.
ಕೋವಿಡ್ ಲಾಕ್ಡೌನ್ ಸಂದರ್ಭ ರಾಜಪ್ಪ ರೆಡ್ಡಿ ಸಂಸಾರ ಸಮೇತ ತೆಲಂಗಾಣದ ಅಂತಾವರಂನಲ್ಲಿರುವ ಪತ್ನಿಯ ಮೆನೆಗೆ ತೆರಳಿದ್ದ. ಈ ಸಮಯದಲ್ಲಿ ಅವರು ಕೆಲವು ತಿಂಗಳುಗಳ ಕಾಲ ಅಲ್ಲಿಯೇ ಉಳಿದಿದ್ದರು. ಇದೇ ಸಂದರ್ಭದಲ್ಲಿ ಅನಸೂಯ ಪಕ್ಕದ ಮನೆಯ, ವಯಸ್ಸಿನಲ್ಲಿ ತನಗಿಂತ ಕಿರಿಯನಾದ ಶ್ರೀಶೈಲ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ತಕ್ಷಣ ರಾಜಪ್ಪ ರೆಡ್ಡಿ ತವರು ಮನೆಯಿಂದ ಕರೆದುಕೊಂಡು ಬಂದಿದ್ದ.
ಆದರೆ ಪತಿಯ ಮನೆಗೆ ಬಂದ ಬಳಿಕವೂ ಇವರಿಬ್ಬರ ಸರಸ ಸಲ್ಲಾಪ ಮುಂದುವರಿದಿದೆ. ಅನಸೂಯಾ ಆಗಾಗ ಶ್ರೀಶೈಲನನ್ನು ಮನೆಗೆ ಕರೆಸಿಕೊಂಡು ಆತನೊಂದಿಗೆ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಾಳೆ. ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗುತ್ತಿದ್ದ ಅನಸೂಯಾ ಸಂಜೆಯಾದರೂ ತಿರುಗಿ ಬರುತ್ತಿರಲಿಲ್ಲ. ಇತ್ತ ಹೆಂಡತಿಯ ಲವ್ವಿಡವ್ವಿಯ ಬಗ್ಗೆ ಚೆನ್ನಾಗಿ ತಿಳಿದಿದ್ದ ರಾಜಪ್ಪ ರೆಡ್ಡಿ, ಆಗಾಗ ಆಕೆಯೊಂದಿಗೆ ಜಗಳವಾಡುತ್ತಿದ್ದ.
ಆದ್ದರಿಂದ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಕೊಲೆ ಮಾಡಲು ಅನುಸೂಯಾ ಸಂಚು ರೂಪಿಸಿದ್ದಾಳೆ. ಪತಿ ಮದ್ಯವ್ಯಸನವನ್ನೇ ಬಂಡವಾಳವಾಗಿಸಿ ಕೊಲೆಗೆ ಸಂಚು ರೂಪಿಸಿದ್ದಾಳೆ.
ಎಂದಿನಿಂತೆ ಆಗಸ್ಟ್ 24ರಂದು ರಾಜಪ್ಪರೆಡ್ಡಿ ಕಂಠ ಪೂರ್ತಿ ಕುಡಿದು ಬಂದಿದ್ದ. ಆಗ ಅನಸೂಯಾ ಆತನಿಗೆ ಕೆಲ ಮಾತ್ರೆಗಳನ್ನು ನೀಡಿದ್ದಳು. ಮಾತ್ರೆ ಸೇವಿಸಿಯೂ ಮೃತಪಡದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ರಾಜಪ್ಪರೆಡ್ಡಿಯ ಕೊಲೆಗೆ ಪ್ರಿಯಕರ ಶ್ರೀಶೈಲ್ ಕೂಡ ನೆರವು ನೀಡಿದ್ದ.
ಆದರೆ, ಗ್ರಾಮಸ್ಥರಿಗೆ ಅನಸೂಯಾ ಮದ್ಯಸೇವನೆ ಮಾಡಿ ಮೃತಪಟ್ಟಿದ್ದಾನೆಂದೇ ನಂಬಿಸಿದ್ದಳು. ಆಕೆಯ ಮಾತನ್ನು ನಂಬಿದ ಗ್ರಾಮಸ್ಥರು ರಾಜಪ್ಪ ರೆಡ್ಡಿಯ ಅಂತ್ಯಕ್ರಿಯೆ ನೆರವೇರಿಸಿದ್ದರು. ಪತಿ ಮೃತಪಟ್ಟ ಬಳಿಕ ಪ್ರಿಯಕರನೊಂದಿಗೆ ಸರಸ ಸಲ್ಲಾಪವಾಡುವಾಗ ಸಿಕ್ಕಿಬಿದ್ದಾಗಲೇ ಸತ್ಯಾಂಶ ಬಯಲಿಗೆ ಬಂದಿದೆ.
ಇದೀಗ ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮುಧೋಳ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.