
ತಿಂಗಳ ಹಿಂದಿನ ಸ್ಟಾಫ್ ನರ್ಸ್ ಆತ್ಮಹತ್ಯೆ ಕೇಸ್: ಮೊಬೈಲ್ ನಿಂದ ಪ್ರಕರಣಕ್ಕೆ ರೋಚಕ ತಿರುವು
Thursday, October 7, 2021
ಬೆಂಗಳೂರು: ನಗರದ ದೇವನಹಳ್ಳಿಯ ಖಾಸಗಿ ಆಸ್ಪತ್ರೆಯ ಸ್ಟಾಫ್ ನರ್ಸ್ ಓರ್ವರು ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ಮೃತ ಸ್ಟಾಫ್ ನರ್ಸ್ ಮೊಬೈಲ್ ನಿಂದಾಗಿ ಸ್ಫೋಟಕ ವಿಚಾರವೊಂದು ಬಯಲಾಗಿದೆ.
ಮೃತ ಸ್ಟಾಫ್ ನರ್ಸ್ ನ ಮೊಬೈಲ್ನಲ್ಲಿ ಆಕೆಯದೇ ಹಸಿಬಿಸಿ ಫೋಟೊಗಳು ದೊರಕಿದ್ದು, ಆಕೆಯ ಹೆತ್ತವರಲ್ಲಿ ಮಗಳದ್ದು ಆತ್ಮಹತ್ಯೆಯಲ್ಲ, ಹತ್ಯೆ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಅಶ್ಲೀಲ ಫೋಟೋದಲ್ಲಿ ಆಕೆಯೊಂದಿಗೆ ಇದ್ದಾತನೇ ಹತ್ಯೆ ಮಾಡಿರುದಾಗಿ ಹೆತ್ತವರು ಗಂಭೀರ ಆರೋಪ ಮಾಡಿದ್ದಾರೆ. ಆರೋಪಿಯನ್ನು ತಕ್ಷಣ ಬಂಧಿಸಿ ಮಗಳ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಆಗಸ್ಟ್ 17 ರಂದು ಶ್ವೇತಾಂಜಲಿ(23 ) ಎಂಬ ಖಾಸಗಿ ಆಸ್ಪತ್ರೆಯ ಸ್ಟಾಫ್ ನರ್ಸ್ ಆತ್ಮಹತ್ಯೆ ಪ್ರಯತ್ನ ಮಾಡಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಆ.27 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಈ ವೇಳೆ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು, ಆಸ್ಪತ್ರೆ ಸಿಬ್ಬಂದಿ ಪ್ರಕರಣ ದಾಖಲಿಸಿದ್ದರು.
ಇದೀಗ ಮೃತಪಟ್ಟ ಸ್ಟಾಫ್ ನರ್ಸ್ ಮೊಬೈಲ್ನಲ್ಲಿ ಆಕೆ ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದ ಗಿರೀಶ್ ಎಂಬುವನು ಜತೆ ಹಸಿಬಿಸಿಯಾಗಿ ತೆಗೆದುಕೊಂಡ ಪೋಟೋಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಲೈಂಗಿಕವಾಗಿ ಬಳಸಿಕೊಂಡು ಮಗಳನ್ನು ಗಿರೀಶ್ ಕೊಲೆ ಮಾಡಿದ್ದಾನೆಂದು ಶ್ವೇತಾಂಜಲಿ ಪಾಲಕರು ಆರೋಪಿಸಿದ್ದಾರೆ . ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಹಾಗೂ ಇನ್ನಿತರರಿಂದ ಹತ್ಯೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ನಡುವೆ ಶ್ವೇತಾಂಜಲಿಗೆ ಸಂಬಂಧಿಯೋರ್ವನ ಜತೆ ಮದುವೆನೂ ನಿಗದಿಯಾಗಿತ್ತು. ಆದರೆ, ಗಿರೀಶ್ ವಿವಾಹಿತನಾಗಿದ್ದರೂ ಶ್ವೇತಾಂಜಲಿಯೊಂದಿಗೆ ಪ್ರೀತಿಯ ನಾಟಕವಾಡಿ ಲೈಂಗಿಕ ಸಂಪರ್ಕ ಬೆಳೆಸಿ ಕೊಲೆ ಮಾಡಿದ್ದಾನೆಂದು ಪಾಲಕರು ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.