
ತಿರುವನಂತಪುರ: ಆನ್ಲೈನ್ನಲ್ಲಿ 299 ರೂ. ಚೂಡಿದಾರ್ ಕೊಳ್ಳಲು ಹೋಗಿ 1 ಲಕ್ಷ ರೂ. ಕಳೆದುಕೊಂಡು ಪೇಚಿಗೆ ಸಿಲುಕಿದ ಮಹಿಳೆ
Saturday, November 13, 2021
ತಿರುವನಂತಪುರಂ: ಇತ್ತೀಚೆಗೆ ಆನ್ಲೈನ್ ವಂಚನೆಗಳು ಬಹಳಷ್ಟು ನಡೆಯುತ್ತಿದ್ದು, ಈ ರೀತಿಯ ಒಂದು ಜಾಲವೇ ಸಕ್ರಿಯವಾಗಿದೆ. ವಿವಿಧ ರೀತಿಯಲ್ಲಿ ಜನರನ್ನು ವಂಚಿಸಿ ಅವರಿಂದ ನಗದು ವಂಚನೆ ಮಾಡುವುದೇ ಈ ಜಾಲದ ಮುಖ್ಯ ಉದ್ದೇಶವಾಗಿದೆ.
ಇಂತಹದ್ದೇ ಮತ್ತೊಂದು ಕೃತ್ಯ ತಿರುವನಂತಪುರಂನಲ್ಲಿ ನಡೆದಿದೆ. ಮಹಿಳೆಯೋರ್ವರು ಆನ್ಲೈನ್ನಲ್ಲಿ ಕೇವಲ 299 ರೂ. ಬೆಲೆಯ ಚೂಡಿದಾರ್ ಕೊಳ್ಳಲು ಹೋಗಿ 1 ಲಕ್ಷ ರೂ. ಹಣ ಕಳೆದುಕೊಂಡು ಪೇಚಿಗೆ ಸಿಲುಕಿದ್ದಾರೆ. ಇದೀಗ ಆಕೆ ತನಗೆ ನ್ಯಾಯ ಕೊಡಿಸಬೇಕೆಂದು ಠಾಣೆಯ ಮೆಟ್ಟಿಲೇರಿದ್ದಾರೆ.
ಮಹಿಳೆಯೊಬ್ಬರು ಫೇಸ್ಬುಕ್ ನಲ್ಲಿ ಚೂಡಿದಾರೊಂದರ ಜಾಹೀರಾತು ನೋಡಿದ್ದಾರೆ. ಅಲ್ಲಿರುವ ಚೂಡಿದಾರ್ ಇಷ್ಟವಾಗಿ ಆ ಲಿಂಕ್ ಅನ್ನು ಓಪೆನ್ ಮಾಡಿದ್ದಾರೆ. ಆ ಚೂಡಿದಾರ್ ಬೆಲೆ ಕೇವಲ 299 ರೂ. ಆಗಿರುವುದರಿಂದ ಅದನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಅದನ್ನು ಆರ್ಡರ್ ಮಾಡಿ ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಿದ್ದಾರೆ ಕೂಡ.
ಚೂಡಿದಾರ್ ಬುಕ್ ಮಾಡಿರುವ ಮಹಿಳೆ ಯಾವಾಗ ಆರ್ಡರ್ ಡೆಲಿವರಿ ಆಗುತ್ತದೆ ಎಂದು ಕಾದು ಕೂತಿದ್ದರು. ಆದರೆ ಎರಡು ದಿನ ಕಳೆದರೂ ಡೆಲಿವರಿ ಬಗ್ಗೆ ಯಾವುದೇ ಮಾಹಿತಿ ಬಂದಿರಲಿಲ್ಲ. ಚೂಡಿದಾರ್ ಬುಕ್ ಮಾಡಿರುವ ಸಂತೋಷದಲ್ಲಿ ಮಹಿಳೆ ತನ್ನ ಮೊಬೈಲ್ಗೆ ಬಂದ ಮೆಸೇಜ್ ನೋಡಲು ಮರೆತಿದ್ದಾರೆ. ಮೂರು ದಿನದಲ್ಲಿ ಚೂಡಿದಾರ್ ಡೆಲಿವರಿ ಆಗುತ್ತೆ ಅಂತ ಮೆಸೇಜ್ ಬಂದಿತ್ತು. ಬಳಿಕ ಅದನ್ನು ನೋಡಿದ ಮಹಿಳೆ ಮೂರು ದಿನಗಳ ಬಳಿಕ ಜಾಹೀರಾತಿನಲ್ಲಿದ್ದ ಮೊಬೈಲ್ ಮೆಸೇಜ್ ಮಾಡಿದ್ದಾರೆ.
ಆದರೆ ಅತ್ತಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಮಹಿಳೆಯ ಫೋನ್ಗೆ 5 ಮೆಸೇಜ್ ಬಂದಿದೆ. ಅದನ್ನು ಓಪನ್ ಮಾಡಿ ನೋಡಿದಾಗ ಈಕೆಯ ಬ್ಯಾಂಕ್ ಖಾತೆಯಿಂದ ಒಟ್ಟು ಒಂದು ಲಕ್ಷ ಹಣ ರೂ. ಕಾಣೆಯಾಗಿತ್ತು. ತಕ್ಷಣ ಮಹಿಳೆ ಮತ್ತೆ ಜಾಹೀರಾತಿನಲ್ಲಿದ್ದ ನಂಬರ್ ಗೆ ಕರೆ ಮಾಡಿದರೆ, ಸ್ವಿಚ್ಡ್ ಆಫ್ ಆಗಿದೆ. ಅದೇ ನಂಬರ್ ಗೆ ಈಕೆಯ ಬ್ಯಾಂಕ್ ಅಕೌಂಟ್ನಿಂದ ಒಂದು ಲಕ್ಷ ರೂ. ಹಣ ವರ್ಗಾವಣೆಯಾಗಿತ್ತು. ಮಹಿಳೆ ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.