
ಮಹಿಳೆಯನ್ನು ಬಿಗಿದಪ್ಪಿ ಅಸಭ್ಯ ವರ್ತನೆ: ಆರೋಪಿಗೆ ಚಪ್ಪಲಿ ಹಾರ ಹಾಕಿ, ಧರ್ಮದೇಟು ನೀಡಿ ಮೆರವಣಿಗೆ
Wednesday, December 15, 2021
ಕೊಪ್ಪಳ: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪದ ಮೇಲೆ ವ್ಯಕ್ತಿಯೋರ್ವರನಿಗೆ ಸಾರ್ವಜನಿಕರು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ಕುಷ್ಟಗಿ ತಾಲೂಕು ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.
ಪ್ರಕಾಶ ಪೂಜಾರ ಎಂಬಾತನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.
ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದ ಜಮೀನಿನಲ್ಲಿದ್ದ ಪ್ರಕಾಶ ಪೂಜಾರಗೆ ವಿವಾಹಿತ ಮಹಿಳೆಯೋರ್ವರು ಗೊಬ್ಬರದ ಬುಟ್ಟಿ ಎತ್ತಿ ತಲೆಗೆ ಇಡುವಂತೆ ಕೋರಿದ್ದಾರೆ. ಸಹಾಯಕ್ಕೆ ಬಂದ ಪ್ರಕಾಶ ಪೂಜಾರ ಮಹಿಳೆಯನ್ನು ಬಿಗಿದಪ್ಪಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಕ್ಷಣ ಮಹಿಳೆ ಚೀರಾಡಿಕೊಂಡಿದ್ದು, ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಆಗ ಆತ ಅಲ್ಲಿಂದ ಪರಾರಿಯಾಗಿದ್ದ.
ಗ್ರಾಮಸ್ಥರು ಈ ಕುರಿತು ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ರಾಜಿ ಪಂಚಾಯತಿ ಮಾಡಲು ಯತ್ನಿಸಿದ್ದರು. ಈ ವೇಳೆ ಮಹಿಳೆಯ ಕಡೆಯವರು ಆಗಿರುವ ಅವಮಾನ ಸಹಿಸಲಾಗದೆ ಆರೋಪಿಗೆ ಚಪ್ಪಲಿ, ಬೇವಿನ ಹಾರ ಹಾಕಿ, ಧರ್ಮದೇಟು ನೀಡಿ ಮರೆವಣಿಗೆ ಮಾಡಿದ್ದಾರೆ. ಇದೇ ವೇಳೆ ಮನನೊಂದ ಮಹಿಳೆ, ಪ್ರಕಾಶ ಪೂಜಾರಗೆ ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾಳೆ.
ಸುಮಾರು ಎಂಟು ಜನ ಸೇರಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಇದರ ಮಧ್ಯೆ ದಲಿತ ವ್ಯಕ್ತಿಯ ಮೇಲೆ ಸವರ್ಣಿಯರಿಂದ ದೌರ್ಜನ್ಯ ಎಂಬ ಮರು ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಹನುಮಸಾಗರ ಪೊಲೀಸ್ ಠಾಣಾಯಲ್ಲಿ ದೂರು - ಪ್ರತಿದೂರು ದಾಖಲಾಗಿದ್ದು, 55 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.