
ಶೀಘ್ರದಲ್ಲೇ ಬರಲಿದೆ ಕೊಳಚೆ ನೀರಿನಿಂದ ಓಡುವ ಕಾರು: ಗಡ್ಕರಿ ಸೂಚನೆ
Saturday, December 4, 2021
ಹೊಸದಿಲ್ಲಿ: ಚರಂಡಿ ಹಾಗೂ ಕೊಳಚೆ ನೀರಿನಿಂದಲೇ ಚಲಿಸುವಂಥಹ ಕಾರುಗಳು ಬಂದಲ್ಲಿ ಎಷ್ಟೊಂದು ಉತ್ತಮವಲ್ಲವೇ. ಹಾಗಾದಲ್ಲಿ ಪೆಟ್ರೋಲ್/ಡೀಸೆಲ್ನ ಅಗತ್ಯವೂ ಇರಲಾರದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ವಿನೂತನ ಐಡಿಯಾ ಹೊಳೆದಿದೆಯಂತೆ.
ಹರಿಯಾಣದ ಫರೀದಾಬಾದ್ನ ತೈಲ ಸಂಶೋಧನಾ ಸಂಸ್ಥೆಯು ತ್ಯಾಜ್ಯ ನೀರಿನಿಂದಲೇ ಸಿದ್ಧಪಡಿಸಿರುವ ಇಂಧನ ಅಥವಾ ಹಸುರು ಜಲಜನಕದ ಮೂಲಕ ಸಂಚರಿಸಬಲ್ಲ ಕಾರನ್ನು ಪ್ರಯೋಗಾರ್ಥವಾಗಿ ತಯಾರಿಸಿದೆ. ಅದನ್ನು ತಾನು ಖರೀದಿ ಮಾಡಿರುವುದಾಗಿ ಗಡ್ಕರಿ ಹೇಳಿದ್ದಾರೆ. ತಾನೇ ಆ ಕಾರನ್ನು ಚಲಾಯಿಸಿ ಪರ್ಯಾಯ ಇಂಧನದಿಂದಲೂ ಕಾರು ಚಲಿಸಲು ಸಾಧ್ಯವಿದೆ ಎಂಬುದನ್ನು ಶೀಘ್ರದಲ್ಲೇ ಸಾಬೀತು ಮಾಡುವುದಾಗಿ ಅವರು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿರುವ ಆರ್ಥಿಕ ಒಗ್ಗೂಡುವಿಕೆಗೆ ಸಂಬಂಧಿಸಿದ ಆರನೇ ಸಮ್ಮೇಳನದಲ್ಲಿ ಭಾಗ ವಹಿಸಿರುವ ವೇಳೆಯಲ್ಲಿ ಗಡ್ಕರಿಯವರು ಈ ವಿಚಾರವನ್ನು ಹೇಳಿದ್ದಾರೆ.
ಹಸುರು ಜಲಜನಕದಿಂದ ದೇಶದ ಸಾರಿಗೆ ವ್ಯವಸ್ಥೆಯ ನಿರ್ವಹಣೆ ಯಾಗುವಂಥ ಹೊಸ ವ್ಯವಸ್ಥೆ ಜಾರಿಗೊಳಿಸಲು ಆಸಕ್ತಿ ಹೊಂದಿದ್ದೇನೆ. ತ್ಯಾಜ್ಯದಿಂದ ಮೌಲ್ಯಯುತ ಇಂಧನ ತಯಾರಿಸುವ ಪರಿಕಲ್ಪನೆಯಡಿ, ಕೊಳಚೆ ನೀರನ್ನು ಬಳಸಿ ಹಸುರು ಜಲಜನಕವನ್ನು (ಗ್ರೀನ್ ಹೈಡ್ರೋಜನ್) ತಯಾರಿಸುವ ಹೊಸ ಪರಿಕಲ್ಪನೆ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಪ್ರತೀ ನಗರಗಳಲ್ಲಿ ಉತ್ಪಾದನೆಯಾಗುವ ಕೊಳಚೆ ನೀರು ಅಥವಾ ಮಳೆಯ ರಾಡಿ ನೀರನ್ನು ಬಳಸಿ ಹಸುರು ಜಲಜನಕವನ್ನು ಉತ್ಪಾದಿಸಬಹುದಾಗಿದೆ. ಅದರ ಮೂಲಕ ಬಸ್, ಲಾರಿ, ಟ್ರಕ್ ಹಾಗೂ ಕಾರುಗಳನ್ನು ಚಲಾಯಿಸುವಂಥ ವ್ಯವಸ್ಥೆ ಜಾರಿಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.