ಸಾಂಸರಿಕ ವಿರಸ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮದ್ಯಪಾನದಿಂದ ಮೃತ್ಯು!
Saturday, December 4, 2021
ಕೊರಟಗೆರೆ: ಕೆಲವರು ಜೀವನದಲ್ಲಿ ಯಶಸ್ಸು ಕಂಡರೂ, ಸಾಂಸಾರಿಕ ಜೀವನದಲ್ಲಿ ವೈಫಲ್ಯ ಕಾಣುವರು. ಸಾಂಸಾರಿಕ ಜೀವನದಲ್ಲಿನ ವೈಫಲ್ಯದಿಂದ ಮನನೊಂದು ಇಬ್ಬರು ಪುರುಷರು ಅತೀವ ಕುಡಿತದ ಚಟ ಬೆಳೆಸಿಕೊಂಡು ಮೃತಪಟ್ಟ ಘಟನೆ ನಡೆದಿದೆ. ಒಂದು ಪ್ರಕರಣದಲ್ಲಿ ಸಾಂಸಾರಿಕ ಏರುಪೇರು ಕಂಡರೆ. ಮತ್ತೊಂದು ಪ್ರಕರಣದಲ್ಲಿ ಹೆಂಡತಿ ಹೊಂದಾಣಿಕೆ ಆಗಲಿಲ್ಲ ಎಂಬ ಕಾರಣವಾಗಿದೆ.
ಎರಡೂ ಪ್ರಕರಣಗಳು ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಓರ್ವ ಮಾರ್ಗದಲ್ಲಿಯೇ ಬಿದ್ದು ಸಾವನ್ನಪ್ಪಿದರೆ ಮತ್ತೋರ್ವ ನಶೆಯೊಂದಿಗೆ ಕ್ರಿಮಿನಾಶಕವನ್ನು ಮಿಶ್ರ ಮಾಡಿ ಅದನ್ನು ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡು
ಕೊರಟಗೆರೆಯ ಕಟ್ಟೆ ಗಣಪತಿ ಕಲ್ಯಾಣಮಂಟಪದಲ್ಲಿ ಕ್ಲೀನಿಂಗ್ ವೃತ್ತಿ ನಿರ್ವಹಿಸುತ್ತಿದ್ದ ಅಪ್ಪ ರೆಡ್ಡಿ ಅತಿಯಾದ ಮದ್ಯಪಾನದಿಂದ ಮಾರ್ಗದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಅದೇ ರೀತಿ ತೋವಿನಕೆರೆ ಹೋಬಳಿಯ ಕಬ್ಬಿಗೆರೆ ಗೊಲ್ಲರಟ್ಟಿ ಯ ಭೂತರಾಯ ಎಂಬಾತ ಮದ್ಯದೊಂದಿಗೆ ಕ್ರಿಮಿನಾಶಕ ಬೆರೆಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ತಮಿಳುನಾಡು ಮೂಲದ ಅಪ್ಪ ರೆಡ್ಡಿಯು ಮೊದಲ ಪತ್ನಿಯನ್ನು ತಮಿಳುನಾಡಿನಲ್ಲಿ ಬಿಟ್ಟು ಎರಡನೆಯ ಪತ್ನಿಯೊಂದಿಗೆ ಗೌರಿಬಿದನೂರಿನಲ್ಲಿ ವಾಸವಿದ್ದ. ಮೊದಲ ಹಾಗೂ ಎರಡನೇ ಪತ್ನಿ ಇಬ್ಬರಿಂದಲೂ ಸಾಂಸಾರಿಕ ಜೀವನದ ನೆಮ್ಮದಿ ದೊರಕಲಿಲ್ಲವೆಂದು ಜೀವನದಲ್ಲಿ ಜಿಗುಪ್ಸೆಗೊಂಡು ಕೊರಟಗೆರೆ ಪಟ್ಟಣದ ಕಟ್ಟೆ ಗಣಪತಿ ಕಲ್ಯಾಣ ಮಂಟಪದಲ್ಲಿ ಕೂಲಿ ಕೆಲಸ ಮಾಡಿಕೊಂಡು ಆಶ್ರಯ ಪಡೆದಿದ್ದ. ಸಾಂಸಾರಿಕ ಜೀವನದ ಹತಾಶೆಯಿಂದ ಅತೀವ ಮದಪಾನದ ಚಟ ಅಂಟಿಸಿಕೊಂಡಿದ್ದ. ನಿನ್ನೆ ಕೊರಟಗೆರೆ ಬೈಪಾಸ್ ನ ಪಾಳುಮನೆ ಬಳಿ ಬಿದ್ದು ಮಧ್ಯರಾತ್ರಿ ಮೃತಪಟ್ಟಿರಬಹುದು ಎನ್ನಲಾಗಿದೆ.
ಮತ್ತೋರ್ವ ಭೂತರಾಯ ಎಂಬಾತ ತೋವಿನಕೆರೆ ಹೋಬಳಿ ಕಬ್ಬಿಗೆರೆ ಗೊಲ್ಲರಟ್ಟಿ ವಾಸಿಯಾಗಿದ್ದು, ಮೊದಲನೇ ಹೆಂಡತಿ ಬುಕ್ಕಾಪಟ್ಟಣ ದಲ್ಲಿ ವಾಸವಿದ್ದು ಆಕೆಯೊಂದಿಗೆ ಈತನಿಗೆ ಮನಸ್ತಾಪವಿತ್ತು. ಈ ಹಿನ್ನೆಲೆಯಲ್ಲಿ ಎರಡನೆಯ ಹೆಂಡತಿಯಾದ ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿ ಗೊಲ್ಲಹಳ್ಳಿಯ ಗೌರಮ್ಮ ನೊಂದಿಗೆ ಜೀವನ ಸಾಗಿಸುತ್ತಿದ್ದ. ಕಳೆದ 2-3 ವರ್ಷಗಳಿಂದ ಆಕೆಯೂ ಈತನೊಂದಿಗೆ ಹೊಂದಾಣಿಕೆಯಾಗದೆ ತೊರೆದು ಹೋಗಿದ್ದಳು. ಇದರಿಂದ ಮನನೊಂದು ಮದ್ಯಪಾನ ದೊಂದಿಗೆ ಕ್ರಿಮಿನಾಶಕ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಸ್ಥಳೀಯರು ಆತನನ್ನು ತೋವಿನಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾನೆ.
ಈ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜ ಪ್ರತ್ಯೇಕ ಪ್ರಕರಣಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.