
ವಂಚಕ ಸುಕೇಶ್ ಚಂದ್ರಶೇಖರ್ ನಟಿ ಜಾಕ್ವಿಲಿನ್ ರನ್ನು ಸ್ನೇಹದ ಬಲೆಗೆ ಬೀಳಿಸಿದ್ದು ಹೇಗೆ ಗೊತ್ತೇ?
Wednesday, December 15, 2021
ಮುಂಬೈ: ವಂಚಕ ಸುಕೇಶ್ ಚಂದ್ರಶೇಖರ್ ಎಂಬಾತನೊಂದಿಗೆ ಡೇಟಿಂಗ್ ನಲ್ಲಿದ್ದಾರೆಂದು ಭಾರಿ ವಿವಾದದಲ್ಲಿ ಸಿಲುಕಿ, ಇಡಿಯಿಂದ ವಿಚಾರಣೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಕುರಿತಂತೆ ನ್ಯಾಯಾಲಯದ ಮುಂದೆ ಅಧಿಕಾರಿಗಳು ಮತ್ತಷ್ಟು ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟೆದ್ದಾರೆ.
ಅಕ್ರಮ ಆಸ್ತಿ ವರ್ಗಾವಣೆ, 200 ಕೋಟಿ ರೂ. ಸುಲಿಗೆ ಪ್ರಕರಣ ಸೇರಿದಂತೆ ಹಲವಾರು ವಂಚನೆ ಪ್ರಕರಣದಲ್ಲಿ ಸಿಲುಕಿರುವ ಸುಕೇಶ್ ಚಂದ್ರಶೇಖರ್ ನೊಂದಿಗೆ ಜಾಕ್ವೆಲಿನ್ ಫರ್ನಾಂಡೀಸ್ ಡೇಟಿಂಗ್ ಮಾಡುತ್ತಿರುವುದಾಗಿ ಆರೋಪ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡಲೆಂಬಂತೆ ಅವರಿಬ್ಬರೂ ಕಿಸ್ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿ ಜಾಕ್ವೆಲಿನ್ ಈಗ ಇಡಿಯಿಂದ ವಿಚಾರಣೆ ಎದುರಿಸುವಂತಾಗಿದೆ.
ತನಿಖೆಯ ಆಳಕ್ಕೆ ಇಳಿದಿರುವ ಇಡಿ ಅಧಿಕಾರಿಗಳಿಗೆ ವಂಚಕ ಸುಕೇಶ್ ಕುರಿತಂತೆ ಇನ್ನಷ್ಟು ಮಾಹಿತಿ ಸಿಕ್ಕಿದೆ. ಆತ ನಟಿ ಜಾಕ್ವಿಲಿನ್ ರನ್ನು ಯಾವ ರೀತಿ ಬಲೆಗೆ ಬೀಳಿಸಿಕೊಂಡಿದ್ದಾನೆಂಬ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಸುಕೇಶ್ ಚಂದ್ರಶೇಖರ್ ತಾನು ಜಾಕ್ವಿಲಿನ್ ರೊಂದಿಗೆ ಸ್ನೇಹ ಬೆಳೆಸಲು ತಮಿಳುನಾಡಿನ ಅಂದಿನ ಸಿಎಂ ಜಯಲಲಿತಾ ಅವರ ಕುಟುಂಬದಿಂದ ಬಂದವನು ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತನ್ನ ಹೆಸರನ್ನು ಸುರೇಶ್ ಎಂದು ಹೇಳಿಕೊಂಡಿದ್ದಾನೆ.
ಆದರೂ ಜಾಕ್ವೆಲಿನ್ ರೊಂದಿಗೆ ಸ್ನೇಹ ಬೆಳೆಸುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಈತ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಚೇರಿಯ ಸಂಖ್ಯೆಯನ್ನು ನಕಲು ಮಾಡಿ ಜಾಕ್ವೆಲಿನ್ ಅವರನ್ನು ಸಂಪರ್ಕಿಸಿದ್ದಾನೆ. ಆ ಬಳಿಕವೇ ಆತ ಆಕೆಯ ಸ್ನೇಹ ಬೆಳೆಸಿದ್ದಾನೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಜಾಕ್ವೆಲಿನ್ ಅವರ ಹೇಳಿಕೆಯನ್ನೂ ಪಡೆದುಕೊಳ್ಳಲಾಗಿದೆ. ‘ನಾನು ತಮ್ಮ ಬಹುದೊಡ್ಡ ಅಭಿಮಾನಿ, ದಕ್ಷಿಣದ ಚಲನಚಿತ್ರೋದ್ಯಮದಲ್ಲಿ ಸಿನಿಮಾ ಮಾಡಬೇಕೆಂದು ಅಂದು ಕೊಂಡಿದ್ದೇನೆ. ಸನ್ ಟಿವಿಯಾದಿಯಾಗಿ ನಾನು ಅನೇಕ ಯೋಜನೆಗಳನ್ನು ಹೊಂದಿದ್ದೇನೆ. ನಾನು ಜಯಲಲಿತಾರ ಕುಟುಂಬಸ್ಥ, ಚೆನ್ನೈನಲ್ಲಿ ವಾಸವಾಗಿದ್ದೇನೆ' ಎಂದು ಆತ ಹೇಳಿರುವುದಾಗಿ ನಟಿ ಜಾಕ್ವೆಲಿನ್ ಹೇಳಿದ್ದಾರೆ. ಆ ಬಳಿಕ ಆಕೆಯ ಮೇಕಪ್ ಆರ್ಟಿಸ್ಟ್ಗೆ ಗೃಹ ಸಚಿವ ಅಮಿತ್ ಷಾರ ಕಚೇರಿಯಿಂದಲೇ ಕರೆ ಬಂದಂತೆ ಮಾಡಿ ಮೋಸ ಮಾಡಿದ್ದಾನೆ. ಆ ಮೂಲಕ ಸುಕೇಶ್ ತಾನು ಸರ್ಕಾರದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದಾನೆ ಎಂದು ಜಾಕ್ವೆಲಿನ್ ತಿಳಿದು ಮೋಸ ಹೋಗಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಸುಕೇಶ್ ಚಂದ್ರಶೇಖರ್ ಫೋನ್ ವಂಚನೆ ತಂತ್ರಜ್ಞಾನವನ್ನು ಬಳಸಿಕೊಂಡು ಸುಲಿಗೆ ದಂಧೆಯನ್ನು ನಡೆಸುತ್ತಿದ್ದ. ಈತ ವಂಚನೆಯ ಮಾಸ್ಟರ್ಮೈಂಡ್. 17 ನೇ ವಯಸ್ಸಿನಿಂದಲೂ ಅಪರಾಧ ಜಗತ್ತಿನ ಭಾಗವಾಗಿದ್ದಾನೆ. ಆತನ ವಿರುದ್ಧ ಅನೇಕ ಎಫ್ಐಆರ್ಗಳು ದಾಖಲಾಗಿವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಜೈಲಿನಲ್ಲಿ ಇರುವಾಗಲೂ ತಂತ್ರಜ್ಞಾನದ ಸಹಾಯದಿಂದ ಜನರನ್ನು ವಂಚಿಸುತ್ತಿದ್ದ. ಕರೆ ಮಾಡಿದ ಫೋನ್ ಸಂಖ್ಯೆಯ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು ಎಂಬಂತೆ ಕರೆ ಮಾಡಿದವರಿಗೆ ನಂಬರ್ ಡಿಸ್ಪ್ಲೇ ಆಗುತ್ತಿತ್ತು. ಇದರಿಂದ ಎಲ್ಲರೂ ಮೋಸ ಹೋಗುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.