
2 ಸಾವಿರ ರೂ. ಕೊಟ್ಟ ಗ್ರಾಹಕ: ಚಿಲ್ಲರೆಗೆ ಹೋದ ಅಂಗಡಿ ಮಾಲಕನಿಗೆ ಕಾದಿತ್ತು ಶಾಕ್
Monday, January 24, 2022
ಭುವನೇಶ್ವರ: ಗ್ರಾಹಕರು ಏನಾದರೂ ಖರೀದಿಸಿ 2 ಸಾವಿರ ರೂ. ಕೊಟ್ಟರೆ, ಚಿಲ್ಲರೆ ತರಲು ಹೊರಗಡೆ ಹೋಗುವ ಮುನ್ನ ಅಂಗಡಿಯ ಮಾಲಕರು ಗಲ್ಲಾಪೆಟ್ಟಿಗೆಯನ್ನು ಭದ್ರ ಮಾಡಿ ಹೋಗಬೇಕು. ಇಲ್ಲದಿದ್ದಲ್ಲಿ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆಯೊಂದು ತಾಜಾ ಉದಾಹರಣೆಯಾಗಿದೆ.
ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿನ ದಿನಸಿ ಅಂಗಡಿಗೆ ದುಷ್ಕರ್ಮಿಯೊಬ್ಬ ಬಂದಿದ್ದಾನೆ. ವಸ್ತುವೊಂದನ್ನು ಖರೀದಿಸಿ 2 ಸಾವಿರ ರೂ. ನೋಟು ನೀಡಿದ್ದಾನೆ. ಆದರೆ, ಅಂಗಡಿ ಮಾಲಕನ ಬಳಿ ಚಿಲ್ಲರೆ ಇರಲಿಲ್ಲ. ಇಲ್ಲೇ ನಿಂತಿರಿ ಈಹ ಚಿಲ್ಲರೆ ಪಡೆದು ಬರುತ್ತೇನೆಂದು ಹೇಳಿ ಮಾಲಕ ಹೊರ ಹೋಗಿದ್ದಾನೆ.
ಆತ ಚಿಲ್ಲರೆ ಪಡೆದು ಮರಳಿ ಬಂದರೆ ಅಂಗಡಿಯ ಮುಂದೆ 2 ಸಾವಿರ ರೂ. ನೋಟ್ ಕೊಟ್ಟಾತ ಇರಲಿಲ್ಲ. ಏನಾಗಿರಬಹುದೆಂದು ಅಂಗಡಿ ಒಳಗೆ ಬಂದು ನೋಡಿದಾಗ ಮಾಲಕನಿಗೆ ಬಹುದೊಡ್ಡ ಶಾಕ್ ಕಾದಿತ್ತು.
ಮಾಲಕ ಚಿಲ್ಲರೆ ಪಡೆದು ಬರುವಷ್ಟರಲ್ಲಿ ಆ ದುಷ್ಕರ್ಮಿಯು ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನೆಲ್ಲ ಸುಲಿಗೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ರೀತಿಯ ಘಟನೆ ಭುವನೇಶ್ವರದ ಸತ್ಯನಗರ ಏರಿಯಾದಲ್ಲಿ ಎರಡನೇ ಬಾರಿಗೆ ಆಗುತ್ತಿದೆ ಎನ್ನಲಾಗಿದೆ.
ಘಟನೆಯ ಸಂಬಂಧ ಅಂಗಡಿ ಮಾಲಕ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.