
ವಿದ್ಯುತ್ ಸಂಪರ್ಕವಿಲ್ಲದಿದ್ದರೂ ಬಿಲ್ ಮಾತ್ರ ಬಂತು ಬರೋಬ್ಬರಿ 36 ಸಾವಿರ ರೂ.: ಬಿಲ್ ನೋಡಿ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದ ವಿಕಲಚೇತನ!
Tuesday, January 18, 2022
ಮಹಾರಾಜಗಂಜ (ಪೂರ್ವಾಂಚಲ): ವಿಶೇಷ ಚೇತನ ವ್ಯಕ್ತಿಯೋರ್ವರ ಮನೆಗೆ ವಿದ್ಯುತ್ ಸಂಪರ್ಕವನ್ನೇ ನೀಡದೆ 36 ಸಾವಿರ ರೂ. ಬಿಲ್ ಕಳುಹಿಸಿರುವ ಘಟನೆ ಪೂರ್ವಾಂಚಲದ ಮಹಾರಾಜಗಂಜದಲ್ಲಿ ನಡೆದಿದೆ.
ಮಹಾರಾಜಗಂಜ್ನ ಘುಘ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಭುವನಿ ಗ್ರಾಮದ ಚುವಾನಿ ಟೋಲಾ ನಿವಾಸಿ ವಿಶೇಷಚೇತನ ಅರ್ಜುನ್ ಪ್ರಸಾದ್ ಮನೆಗೆ ಈ ಬಿಲ್ ಬಂದಿದೆ. ಅದನ್ನು ನೋಡಿದ ಅವರು ಕಂಗಾಲಾಗಿ ಹೋಗಿದ್ದು, ಈ ಬಿಲ್ ನೋಡಿದ ತಕ್ಷಣ ಪ್ರಜ್ಞೆಯನ್ನೇ ಕಳೆದುಕೊಂಡಿದ್ದಾರೆ. ಇದೀಗ ನ್ಯಾಯಕ್ಕಾಗಿ ಅವರು ವಿದ್ಯುತ್ ಇಲಾಖೆಯ ಮೊರೆ ಹೊಕ್ಕಿದ್ದಾರೆ.
2012ರಲ್ಲಿ ತಮ್ಮ ಗ್ರಾಮವನ್ನು ರಾಮಮನೋಹರ್ ಲೋಹಿಯಾ ಯೋಜನೆಯಡಿ ಆಯ್ಕೆ ಮಾಡಲಾಗಿತ್ತು. ಆ ಸಂದರ್ಭ ನಮ್ಮ ಜಾಗದಲ್ಲಿ ಶೌಚಗೃಹದ ನಿರ್ಮಾಣ ಕಾರ್ಯ ನಡೆದಿತ್ತು. ಆಗ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ಗ್ರಾಮದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡುವ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಆದರೆ ಆ ಬಳಿಕ ವಿದ್ಯುತ್ ಕಂಬಕ್ಕೆ ವಿದ್ಯುತ್ ಸಂಪರ್ಕ ನೀಡದೆ ಮನೆಯ ಶೌಚಗೃಹಕ್ಕೂ ಮೀಟರ್ ಹಾಕಲಾಗಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೂ ವಿದ್ಯುತ್ ಮಾತ್ರ ಬಂದಿರಲಿಲ್ಲ. ಈ ಬಗ್ಗೆ ವಿದ್ಯುತ್ ಸಂಪರ್ಕ ನೀಡುವಂತೆ ಹಲವಾರು ಮನವಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ. ಆದರೆ ಬಿಲ್ ಮಾತ್ರ ಬಂದಿದೆ ಎಂದು ಅರ್ಜುನ್ ಪ್ರಸಾದ್ ಹೇಳಿದ್ದಾರೆ.
ಪ್ರತಿ ತಿಂಗಳೂ ಅರ್ಜುನ್ ಅವರಿಗೆ ಕರೆಂಟ್ ಬಿಲ್ ಬರುತ್ತಿತ್ತು. ಬಿಲ್ ಕಳುಹಿಸುತ್ತಿರುವ ಬಗ್ಗೆ 2012ರಿಂದ ಸುತ್ತದ ಜಾಗವಿಲ್ಲ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಆದರೆ ಈಗ ಒಟ್ಟಿಗೇ 36 ಸಾವಿರ ರೂ. ಬಿಲ್ ಬಂದಿದೆ. ಈ ಬಗ್ಗೆ ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಅದು ವರದಿಯಾಗುತ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಇ. ಹರಿಶಂಕರ್ ಹೇಳಿದ್ದಾರೆ.