
ವಾರದ ಹಿಂದೆಯಷ್ಟೇ ಮದುವೆಯಾದ ಎಸ್ಐ ರಸ್ತೆ ಅಪಘಾತಕ್ಕೆ ಬಲಿ!
Sunday, January 2, 2022
ಹೈದರಾಬಾದ್: ವಾರದ ಹಿಂದಷ್ಟೇ ವಿವಾಹವಾದ ಸಬ್ ಇನ್ಸ್ಪೆಕ್ಟರ್ ಹಾಗೂ ಅವರ ತಂದೆ ರಸ್ತೆ ಅಪಘಾತಕ್ಕೆ ಬಲಿಯಾದ ದುರಂತ ಘಟನೆಯೊಂದು ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ತೆಲಂಗಾಣದ ಚಿಂತಪಲ್ಲಿ ಮಂಡಲದಲ್ಲಿ ಆರ್ಟಿಸಿ ಬಸ್ ಹಾಗೂ ಆಟೋ ರಿಕ್ಷಾ ಮಧ್ಯೆ ಮುಖಾಮುಖಿಯಾಗಿ ಢಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಎಸ್ಐ ನೆನವತ್ ಶ್ರೀನು ನಾಯಕ್ ಹಾಗೂ ಅವರ ತಂದೆ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಶ್ರೀನು ನಾಯಕ್ ವಿಕರಾಬಾದ್ನಲ್ಲಿ ಎಸ್ಐ ಆಗಿದ್ದರು.
ಎಸ್ಐ ಶ್ರೀನು ನಾಯಕ್ ಗೆ ಒಂದು ವಾರದ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ಇವರು ರಂಗಾರೆಡ್ಡಿ ಜಿಲ್ಲೆಯ ಮಡ್ಗುಲ ಮಂಡಲದ ಮಾನ್ಯಾ ತಾಂಡದ ನಿವಾಸಿ. ಹೈದರಾಬಾದ್ನಿಂದ ದೇವರಕೊಂಡಕ್ಕೆ ಪ್ರಯಾಣಿಸುತ್ತಿದ್ದ ಆರ್ಟಿಸಿ ಬಸ್ ಎದುರಿಗೆ ಬಂದ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಒಳಗೆ ಇದ್ದ ಎಸ್ಐ ಮತ್ತು ಅವರ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರ್ಯಕ್ರಮವೊಂದಕ್ಕೆ ಹೋಗಿ ಅಲ್ಲಿಂದ ವಾಪಸ್ ಎಸ್ಐ ತಮ್ಮ ತಂದೆಯೊಂದಿಗೆ ಆಟೋದಲ್ಲಿ ಮನೆಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ. ಎಸ್ಐ ಸಾವಿನಿಂದ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮೃತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಎಸ್ಐ ಅಕಾಲಿನ ನಿಧನಕ್ಕೆ ಸಹೋದ್ಯೋಗಿಗಳು ಕೂಡ ಕಂಬನಿ ಮಿಡಿದಿದ್ದಾರೆ.