
ಪತಿಯ ಹಿಂಸೆ ಆರೋಪ : ಪತ್ನಿ ನೇಣಿಗೆ ಶರಣು
Thursday, January 27, 2022
ರಾಮನಗರ: ಪತಿಯ ಕಿರುಕುಳ ತಾಳಲಾಗದೆ 5 ತಿಂಗಳ ಗರ್ಭಿಣಿಯೊಬ್ಬಳು ನೇಣಿಗೆ ಶರಣಾಗಿದ್ದಾರೆ ಎಂಬ ಆರೋಪವೊಂದು ನಗರದ ಐಜೂರು ಠಾಣಾ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ.
ನಗರದ ಮಂಜುನಾಥ ನಗರದ ತನ್ನ ತವರು ಮನೆಯಲ್ಲಿ ಜಾಹ್ನವಿ (23) ನೇಣಿಗೆ ಶರಣಾದ ಗರ್ಭಿಣಿ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ನಿವಾಸಿ ಕರ್ಣ ಎಂಬಾತನೊಂದಿಗೆ ಜಾಹ್ನವಿಯವರ ವಿವಾಹ ಕಳೆದ 9 ತಿಂಗಳ ಹಿಂದೆ ನಡೆದಿತ್ತು. ಆದರೆ ಕರ್ಣ ತಮ್ಮ ಮಗಳಿಗೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದು, ಪರಿಣಾಮ ಆಕೆ ತಿಂಗಳ ಹಿಂದೆ ಆಕೆ ತವರು ಮನೆಗೆ ವಾಪಸ್ಸಾಗಿದ್ದಳು. ಆ ಬಳಿಕವೂ ಕರೆ ಮಾಡಿ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದ ಎಂದು ಮೃತಳ ಪೋಷಕರು ದೂರಿದ್ದಾರೆ.
ಪತಿಯ ನಿರಂತರ ಚಿತ್ರ ಹಿಂಸೆಯನ್ನು ತಾಳಲಾರದೆ ಮನೆಯಲ್ಲಿ ಯಾರು ಇಲ್ಲದ ಸಮಯ ಜಾಹ್ನವಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.