
ತವರು ಮನೆಯಲ್ಲಿದ್ದ ವಾರಕ್ಕೊಮ್ಮೆ ಹೊಟೇಲ್ ಗೆ ಹೋಗುವ ಅವಕಾಶ ಪತಿಯ ಮನೆಯಲ್ಲಿ ದೊರಕಿಲ್ಲ: ಮನನೊಂದ ಮಹಿಳೆ ಮಕ್ಕಳೊಂದಿಗೆ ಬೆಂಕಿಹಚ್ಚಿ ಆತ್ಮಹತ್ಯೆ
Friday, January 7, 2022
ದೊಡ್ಡಬಳ್ಳಾಪುರ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ವಿವಾಹಿತ ಯುವತಿಯೋರ್ವಳು ತನ್ನಿಬ್ಬರು ಪುಟಾಣಿ ಮಕ್ಕಳನ್ನು ಅಪ್ಪಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಎಸ್ ಎಂ ಗೊಲ್ಲಹಳ್ಳಿಯಲ್ಲಿಯಲ್ಲಿ ಮೊನ್ನೆ ನಡೆದಿದೆ.
ತಾಯಿ ಸಂಧ್ಯಾ (33) ಹಾಗೂ ಆಕೆಯ 4 ಹಾಗೂ 2 ವರ್ಷದ ಇಬ್ಬರು ಮಕ್ಕಳು ಬೆಂಕಿಯಲ್ಲಿ ಉರಿದು ಮೃತಪಟ್ಟವರು.
ಐದು ವರ್ಷಗಳ ಹಿಂದೆ ಸಂಧ್ಯಾ ವಿವಾಹವು ಶ್ರೀಕಾಂತ ಎಂಬವರೊಂದಿಗೆ ನಡೆದಿತ್ತು. ಪತಿ ಹಾಗೂ ಅತ್ತೆ-ಮಾವನ ಜತೆ ಸಂಧ್ಯಾ ನೆಲೆಸಿದ್ದರು. ಆದರೆ ಸಂಧ್ಯಾ ಇಂಥದ್ದೊಂದು ಕಠೋರ ನಿರ್ಧಾರವನ್ನು ಕೈಗೊಂಡು ಇಬ್ಬರು ಕರುಳಕುಡಿಗಳನ್ನೂ ಜೀವಂತವಾಗಿ ಸುಟ್ಟುಹಾಕಿದ್ದಾಳೆ. 5 ಲೀಟರ್ ಪೆಟ್ರೋಲ್ ಖರೀದಿಸಿ ತಾನೂ ಸೇರಿ ಇಬ್ಬರ ಮೈಮೇಲೂ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ. ಘಟನೆಯ ವೇಳೆ ತನ್ನಿಬ್ಬರು ಮಕ್ಕಳನ್ನು ಆಕೆ ಬಿಗಿಯಾಗಿ ಅಪ್ಪಿ ಹಿಡಿದುಕೊಂಡಿದ್ದಳು.
ಸ್ಥಳೀಯರು, ಮನೆಯವರು ಹೇಳುವ ಪ್ರಕಾರ ಕುಟುಂಬದಲ್ಲಿ ಯಾವುದೇ ಮನಸ್ತಾಪ ಇರಲಿಲ್ಲ. ಎಲ್ಲರೂ ಅನ್ಯೋನ್ಯವಾಗಿಯೇ ಇದ್ದರು. ಆದ್ದರಿಂದ ಈ ಆತ್ಮಹತ್ಯೆಯ ಹಿಂದಿರುವ ಕಾರಣ ನಿಗೂಢವಾಗಿತ್ತು. ಇದೀಗ ಆತ್ಮಹತ್ಯೆ ಹಿಂದಿನ ಕಾರಣವನ್ನು ಪೊಲೀಸರು ಭೇದಿಸಿದ್ದಾರೆ.
ಸಂಧ್ಯಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನ ಯಲಹಂಕದಲ್ಲಿ. ಅದು ಪಟ್ಟಣವಾದ್ದರಿಂದ ಅವರು ಮದುವೆಗಿಂತ ಮೊದಲು ವಾರಕ್ಕೊಮ್ಮೆಯಾದರೂ ಹೊಟೇಲ್ ಹೋಗಿ ತಿನ್ನುವ ಪರಿಪಾಠ ಹೊಂದಿದ್ದರು. ಅದೇ ರೀತಿ ಆಕೆ ಮದುವೆಯಾದ ಬಳಿಕವೂ ಹೊರಗಡೆ ಸುತ್ತಾಡಿ ಮಕ್ಕಳ ಜತೆಯಲ್ಲಿ ಹೋಟೆಲ್ನಲ್ಲಿ ತಿನ್ನುವ ಆಸೆ ಹೊಂದಿದ್ದರು. ಇದನ್ನು ಪತಿಯೊಂದಿಗೂ ತಿಳಿಸಿದ್ದರು.
ಆದರೆ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಪತಿ ಶ್ರೀಕಾಂತ್ ಗೆ ಇದು ಇಷ್ಟವಿರಲಿಲ್ಲ. ಮನೆಯಲ್ಲಿಯೇ ಚೆನ್ನಾಗಿ ತಿನ್ನುವ ಬದಲು ಹೊರಗಡೆ ಆಹಾರ ಏಕೆ ಎಂದು ಕೇಳುತ್ತಿದ್ದರು. ಇದರಿಂದ ಸಂಧ್ಯಾ ಬಹಳ ನೊಂದಿದ್ದರು ಎನ್ನಲಾಗಿದೆ. ಹೋಟೆಲ್ಗೆ ಕರೆದುಕೊಂಡು ಹೋಗುವಂತೆ ಪತಿಗೆ ಸಂಧ್ಯಾ ನಿತ್ಯವೂ ಹೇಳುತ್ತಿದ್ದರು. ತವರು ಮನೆಯಲ್ಲಿ ಇರುವಾಗ ವಾರಕ್ಕೆ ಎರಡು ಬಾರಿಯಾದರೂ ಹೋಟೆಲ್ಗೆ ಹೋಗುತ್ತಿದ್ದರು. ಆದರೆ ಪತಿ ಅದನ್ನು ಒಪ್ಪುತ್ತಿಲ್ಲ ಎಂದು ಸಂಧ್ಯಾ ತಾಯಿಯ ಬಳಿಯೂ ಅಳಲು ತೋಡಿಕೊಂಡಿದ್ದರು.
ತನ್ನ ಜೀವನ ಇಷ್ಟೇ ಆಗಿಹೋಯ್ತು. ಆಸೆಗಳು ಈಡೇರುವುದಿಲ್ಲವೆಂದು ನೊಂದಿದ್ದರು. ಪರಿಣಾಮ ಸಂಧ್ಯಾ ಜೀವನವೇ ಬೇಡವೆಂದು ಇಬ್ಬರು ಮಕ್ಕಳೊಂದಿಗೆ ಪೆಟ್ರೋಲ್ ಸುರಿದಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.