
ವ್ಯಕ್ತಿಯ ಹತ್ಯೆ ಮಾಡಿದ ಮಂಡ್ಯದ ಮಾಜಿ ಶಾಸಕ ಪುತ್ರ ಅರೆಸ್ಟ್: 10 ಲಕ್ಷ ರೂ., ಕಾರಿನಾಸೆಗೆ ಪೊಲೀಸ್ ಇನ್ ಸ್ಪೆಕ್ಟರ್ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರೂ, ಬಯಲಿಗೆ ಬಂದಿದ್ದೇ ರೋಚಕ
Monday, February 28, 2022
ಮಂಡ್ಯ: ಮಳವಳ್ಳಿ ತಾಲೂಕಿನ ಪಂಡಿತಹಳ್ಳಿ ಸಮೀಪ ಫೆ.9ರಂದು ಕೊಲೆಗೈದು ರಸ್ತೆಯಲ್ಲಿ ಬಿಸಾಡಿದ್ದ ಕೊಳ್ಳೇಗಾಲ ಮೂಲದ ಸಲೀಂ (40) ಹತ್ಯೆ ಪ್ರಕರಣ ತಿರುವು ಪಡೆದಿದ್ದು, ಜಿಲ್ಲೆಯ ಮಾಜಿ ಶಾಸಕರೊಬ್ಬರ ಪುತ್ರನ ಕೈವಾಡದ ಶಂಕೆ ವ್ಯಕ್ತವಾಗಿದೆ. ಈ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಲ್ ಇನ್ಸ್ಪೆಕ್ಟರ್ರೊಬ್ಬರು ಯತ್ನ ಮಾಡಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಇದೀಗ ಈ ಕೊಲೆ ಪ್ರಕರಣದ ಬೆನ್ನುಹತ್ತಿದ ಪೊಲೀಸರು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರ ಶ್ರೀಕಾಂತ್ ನನ್ನು ಬಂಧಿಸಿದ್ದಾರೆ.
ನಕಲಿ ರೈಸ್ ಪುಲ್ಲಿಂಗ್ ನೀಡಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿರುವ ಆರೋಪ ಶ್ರೀಕಾಂತ್ ಮತ್ತು ಆತನ ಸಹಚರರ ಮೇಲೆ ಬಂದಿದೆ. ಹಂತಕರು ಮೈಸೂರಿನಲ್ಲಿ ಸಲೀಂನನ್ನು ಕೊಂದು ಮಳವಳ್ಳಿಯ ಪಡಂತಹಳ್ಳಿಯ ರಸ್ತೆ ಬದಿಯಲ್ಲಿ ಮೃತದೇಹವನ್ನು ಎಸೆದಿದ್ದರು. ಈ ಪ್ರಕರಣದಿಂದ ಪಾರಾಗಲು ಪೊಲೀಸ್ ಇನ್ ಸ್ಪೆಕ್ಟರ್ ನೆರವಿನಿಂದ ಮಾಸ್ಟರ್ ಪ್ಲ್ಯಾನ್ ಮಾಡಡಿದ್ದರು ಎಂಬ ಅಂಶ ತನಿಖೆಗೆ ಬೆಳಕಿಗೆ ಬಂದಿದೆ.
10 ಲಕ್ಷ ರೂ. ಕ್ಯಾಶ್ ಹಾಗೂ ಹೊಸ ಕಾರಿನ ಆಸೆಗೆ ಈ ಪ್ರಕರಣದಿಂದ ಶ್ರೀಕಾಂತ್ ಹೆಸರನ್ನು ಕೈಬಿಡಲು ಮಳವಳ್ಳಿ ಉಪ ವಿಭಾಗದ ಪೊಲೀಸ್ ಇನ್ ಸ್ಪೆಕ್ಟರ್ ಧನರಾಜ್ ಒಪ್ಪಿದ್ದರು ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಮೃತದೇಹವನ್ನು ಹಾಕಿ, ಈ ಪ್ರಕರಣದಲ್ಲಿ ಮೂವರನ್ನು ಒಳಗೆ ಹಾಕಲು ಶ್ರೀಕಾಂತ್ ಪ್ಲ್ಯಾನ್ ಮಾಡಿದ್ದ. ಹಣದಾಸೆಗೆ ಆ ಮೂವರು ಸುಪಾರಿ ಪಡೆದುಕೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಆದರೆ ಮೃತದೇಹ ಹಾಕುವ ಸಂದರ್ಭ ಮಾಡಿರುವ ಎಡವಟ್ಟಿನಿಂದ ಪ್ರಕರಣ ಬಯಲಾಗಿದೆ. ಬೆಳಕವಾಡಿ ಠಾಣೆಯ ವ್ಯಾಪ್ತಿ ಬದಲಿಗೆ ಮಳವಳ್ಳಿ ಗ್ರಾಮಾಂತರ ಲಿಮಿಟ್ಗೆ ಮೃತದೇಹವನ್ನು ಹಾಕಿ ಠಾಣೆಗೆ ಬಂದು ಶರಣಾಗಿದ್ದಾರೆ ಮೂವರು ಆರೋಪಿಗಳು. ಕೇವಲ 100 ಮೀ. ವ್ಯತ್ಯಾಸದಿಂದ ಮಾಸ್ಟರ್ ಪ್ಲ್ಯಾನ್ ಉಲ್ಟಾ ಹೊಡೆದಿದೆ. ಮಳವಳ್ಳಿ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ರಾಜೇಶ್ ಹಾಗೂ ತಂಡ ತನಿಖೆಯಿಂದ ಪ್ರಕರಣ ಬಯಲಾಗಿದೆ.
ರೈಸ್ ಪುಲ್ಲಿಂಗ್ ವಿಚಾರವಾಗಿ ಈಗಾಗಲೇ ರಾಜ್ಯದಲ್ಲಿ ಹಲವು ಅಪರಾಧ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇದೇ ವಿಚಾರವಾಗಿಯೇ ಸಲೀಂ ಕೊಲೆ ನಡೆದಿದೆ ಎನ್ನಲಾಗಿದೆ.
ಸಲೀಂ ತನ್ನ ಬಳಿ ತಾಮ್ರದ ಬೊಂಬು (ರೈಸ್ ಪುಲ್ಲಿಂಗ್) ಇರುವುದಾಗಿ ಹೇಳಿ ಶ್ರೀಕಾಂತ್ ಜತೆ 500 ಕೋಟಿ ರೂ.ಗೆ ವ್ಯವಹಾರವನ್ನು ಕುದುರಿಸಿ 5 ಲಕ್ಷ ರೂ. ಮುಂಗಡ ಪಡೆದಿದ್ದನು. ಫೆ. 7ರಂದು ಶ್ರೀಕಾಂತ್, ಸಲೀಂನನ್ನು ಮೈಸೂರಿನ ಇಲವಾಲ ಸಮೀಪಕ್ಕೆ ಕರೆಸಿದ್ದನೆನ್ನಲಾಗಿದೆ. ಆ ವೇಳೆ ರೈಸ್ ಪುಲ್ಲಿಂಗ್ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದು ಒಬ್ಬರಿಗೊಬ್ಬರು ಬಡಿದಾಡಿಕೊಳ್ಳುವ ವೇಳೆ ಸಲೀಂ ಮೃತಪಟ್ಟಿದ್ದಾನೆ.