ಭಾರತದಿಂದ ಕಳುವಾಗಿದ್ದ 1,200 ವರ್ಷಗಳಷ್ಟು ಹಳೆಯದಾದ ಬುದ್ಧನ ವಿಗ್ರಹ ಇಟಲಿಯಲ್ಲಿ ಪತ್ತೆ
Saturday, February 12, 2022
ನವದೆಹಲಿ: ಸುಮಾರು 20 ವರ್ಷಗಳ ಹಿಂದೆ ಭಾರತದಿಂದ ಕಳವಾಗಿದ್ದ ಬುದ್ಧನ ಮೂರ್ತಿಯೊಂದು ಇದೀಗ ಇಟಲಿಯಲ್ಲಿ ಪತ್ತೆಯಾಗಿದೆ. ಸುಮಾರು 1,200 ವರ್ಷಗಳಷ್ಟು ಹಳೆಯದಾದ ‘ಅವಲೋಕಿತೇಶ್ವರ ಪದ್ಮಪಾಣಿ’ಯ ವಿಗ್ರಹ ಇದಾಗಿದೆ. ಈ ಕುರಿತು ಭಾರತೀಯ ದೂತವಾಸ ಕೇಂದ್ರ ಮಾಹಿತಿ ನೀಡಿದೆ.
ಈ ‘ಅವಲೋಕಿತೇಶ್ವರ ಪದ್ಮಪಾಣಿ’ ಮೂರ್ತಿಯನ್ನು ಮರಳಿ ಪಡೆಯಲಾಗಿದೆ ಎಂದು ಮಿಲನ್ನಲ್ಲಿರುವ ಭಾರತೀಯ ದೂತವಾಸ ಕೇಂದ್ರ ಟ್ವೀಟ್ ಮೂಲಕ ತಿಳಿಸಿದೆ. ಕಳ್ಳಸಾಗಟದ ಮೂಲಕ ವಿವಿಧ ದೇಶಗಳಿಗೆ ರವಾನೆಯಾಗಿರುವ ವಿಗ್ರಹಗಳ ಪತ್ತೆಗೆ ಕೇಂದ್ರ ಸರ್ಕಾರ ರಚಿಸಿರುವ ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ಜತೆಗೆ ಸಿಂಗಾಪುರ ಹಾಗೂ ಲಂಡನ್ನ ಆರ್ಟ್ ರಿಕವರಿ ಇಂಟರ್ನ್ಯಾಷನಲ್ ವಿಗ್ರಹವನ್ನು ಪತ್ತೆ ಹಚ್ಚಿದೆ. ಇದು 8ರಿಂದ 12ನೇ ಶತಮಾನಕ್ಕಿಂತ ಹಳೆಯದಾದ ಕಲ್ಲಿನ ವಿಗ್ರಹವೆಂದು ಅಂದಾಜು ಮಾಡಲಾಗಿದೆ. ಕುಂದಲಪುರ ದೇವಾಲಯದಲ್ಲಿ ಸುಮಾರು 1,200 ವರ್ಷಗಳ ಕಾಲ ಈ ವಿಗ್ರಹ 2000ನೇ ಇಸವಿಯಲ್ಲಿ ಭಾರತದಿಂದ ಅಕ್ರಮವಾಗಿ ಕದ್ದು ಕಳ್ಳಸಾಗಾಟ ಮಾಡಲಾಗಿತ್ತು.
100 ವರ್ಷಗಳ ಹಿಂದೆ ವಾರಣಾಸಿಯಿಂದ ಕದ್ದು ಕೆನಡಾಗೆ ಕೊಂಡೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕಳೆದ ತಿಂಗಳಷ್ಟೇ ಉತ್ತರ ಪ್ರದೇಶ ಸರ್ಕಾರ ವಾಪಸ್ ಪಡೆದುಕೊಂಡಿತ್ತು.