
ಅಂತಾರಾಜ್ಯ ಮಹಿಳಾ ವಂಚಕ ಅರೆಸ್ಟ್: 7 ರಾಜ್ಯಗಳ 14 ಮಂದಿಗೆ ವಂಚನೆ
Tuesday, February 15, 2022
ಭುವನೇಶ್ವರ(ಒಡಿಶಾ): ಅಂತಾರಾಜ್ಯ ಕಳ್ಳರು, ಖದೀಮರ ಬಗ್ಗೆ ನಾವು ಕೇಳಿರುತ್ತೇವೆ. ಈ ರೀತಿಯ ಕಳ್ಳರಲ್ಲಿ ಬೈಕ್, ಕಾರು, ಚಿನ್ನಾಭರಣ ಕದಿಯುವ ಖದೀಮರ ಜೊತೆಗೆ, ಡ್ರಗ್ಸ್ ಅಥವಾ ಇನ್ನಾವುದೇ ಮೌಲ್ಯಯುತ ಸೊತ್ತುಗಳನ್ನು ಕಳ್ಳಸಾಗಾಟ ಮಾಡುವ ವಂಚಕರ ಬಗೆಗೂ ಕೇಳಿರುತ್ತೇವೆ. ಆದರೆ ಇಲ್ಲೊಬ್ಬ 'ಅಂತಾರಾಜ್ಯ ಮಹಿಳಾ ವಂಚಕ' ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಈತ ಮಹಿಳೆಯರಿಗೆ ವಂಚಿಸುತ್ತಿದ್ದ ರೀತಿಯೇ ಹುಬ್ಬೇರಿಸುವಂತಿದೆ.
ಈ ಕಾಮುಕ ಸುಮಾರು 48 ವರ್ಷಗಳ ಅವಧಿಯಲ್ಲಿ 7 ರಾಜ್ಯಗಳ 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದಾನೆ. ಇದೀಗ ಪೊಲೀಸರು ಭುವನೇಶ್ವರದಲ್ಲಿ ಸುಮಾರು 65 ವರ್ಷ ಈ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರ ನಿವಾಸಿ ಈ ವ್ಯಕ್ತಿ, ಮದುವೆಯಾಗಿ ಮಹಿಳೆಯರಿಂದ ಹಣ ಪಡೆದು, ಮೋಸ ಮಾಡಿ ಪರಾರಿಯಾಗುತ್ತಿದ್ದ.
ಈ ಆರೋಪಿ ಮೊದಲು ವಿವಾಹವಾಗಿದ್ದು 1982ರಲ್ಲಿ, ಸುಮಾರು 20 ವರ್ಷಗಳ ನಂತರ ಎರಡನೇ ವಿವಾಹವಾಗಿದ್ದ. ಬಳಿಕದ ವರ್ಷಗಳಲ್ಲಿ ಈತ 12 ವಿವಾಹವಾಗಿದ್ದಾನೆ. 2002 ರಿಂದ 2020ರ ನಡುವೆ ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳ ಮೂಲಕ ಮಹಿಳೆಯರ ಸ್ನೇಹ ಬೆಳೆಸಿ ವಿವಾಹವಾಗುತ್ತಿದ್ದ ಈತ, ಅವರನ್ನು ಕೆಲವೇ ದಿನಗಳಲ್ಲಿ ವಂಚಿಸಿ, ಪರಾರಿಯಾಗುತ್ತಿದ್ದ.
ಈ ಕಾಮುಕ ತನ್ನನ್ನು ವೈದ್ಯ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ. ಈತ ವಕೀಲರು, ಶಿಕ್ಷಕಿ, ವೈದ್ಯರು ಹೀಗೆ ಉನ್ನತ ಶಿಕ್ಷಣ ಪಡೆದವರನ್ನೇ ವಿವಾಹವಾಗಿದ್ದಾನೆ. ಪ್ಯಾರಾ ಮಿಲಿಟರಿ ಪಡೆಗಳಲ್ಲಿ ವೃತ್ತಿ ನಿಋವಹಿಸುತ್ತಿದ್ದ ಮಹಿಳೆಯನ್ನೂ ಕೂಡಾ ಇದೇ ರೀತಿಯಾಗಿ ವಂಚಿಸಿ ವಿವಾಹವಾಗಿದ್ದಾನೆ. ಈ ಮೊದಲೇ ವಿವಾಹವಾಗಿರುವುದನ್ನು ತಿಳಿಯದ ಮಹಿಳೆಯರು ಆತನನ್ನು ವಿವಾಹವಾಗುತ್ತಿದ್ದರು. ಹೆಚ್ಚಾಗಿ ಮಧ್ಯವಯಸ್ಕ ಒಂಟಿ ಮಹಿಳೆಯರನ್ನು ಗುರಿಯಾಗಿಸುತ್ತಿದ್ದ ಆರೋಪಿ, ವಿಚ್ಛೇದಿತ ಮಹಿಳೆಯರನ್ನು ಕೂಡಾ ಮೋಸಗೊಳಿಸಿದ್ದಾನೆ ಎಂದು ಎಂದು ಉಮಾಶಂಕರ್ ದಾಶ್ ವಿವರಿಸಿದರು.
ದೆಹಲಿ, ಪಂಜಾಬ್, ಅಸ್ಸಾಂ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಏಳು ರಾಜ್ಯಗಳಲ್ಲಿನ ಮಹಿಳೆಯರನ್ನು ಈ ವ್ಯಕ್ತಿ ವಂಚಿಸಿದ್ದಾನೆ. ಈತನ ಮೊದಲ ಇಬ್ಬರು ಪತ್ನಿಯರು ಒಡಿಶಾದರಾಗಿದ್ದಾರೆ. ಕೊನೆಯ ಪತ್ನಿ ದೆಹಲಿಯವರಾಗಿದ್ದು, ಶಿಕ್ಷಕಿಯಾಗಿದ್ದಾರೆ. ಆಕೆ ನೀಡಿರುವ ದೂರಿನನ್ವಯ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಬಳಿಯಿದ್ದ 11 ಎಟಿಎಂ ಕಾರ್ಡ್ಗಳು, 4 ಆಧಾರ್ ಕಾರ್ಡ್ಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ಹೈದರಾಬಾದ್ ಹಾಗೂ ಎರ್ನಾಕುಲಂನಲ್ಲಿ ನಿರುದ್ಯೋಗಿ ಯುವಕರಿಗೆ ವಂಚನೆ ಮಾಡಿರುವ ಆರೋಪ ಮತ್ತು ಸಾಲ ಮರುಪಾವತಿ ಮಾಡದ ಆರೋಪದಲ್ಲಿ ಎರಡು ಬಾರಿ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.