
ಪತ್ನಿ ನಾಪತ್ತೆಯ ಬಳಿಕ ಶ್ರದ್ಧಾಂಜಲಿ ಕೋರಿ ಪತಿಯಿಂದ ಫೇಸ್ ಬುಕ್ ನಲ್ಲಿ ಪೋಸ್ಟ್: ಆ ಬಳಿಕ ನಡೆದದ್ದೇ ಹೈಡ್ರಾಮಾ
Sunday, February 27, 2022
ದೊಡ್ಡಬಳ್ಳಾಪುರ: ನಾಪತ್ತೆಯಾದ ಪತ್ನಿಯ ಫೋಟೋವನ್ನು ಪತಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಶ್ರದ್ಧಾಂಜಲಿ ಕೋರಿರುವ ವಿಚಿತ್ರ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಲ್ಲಿ ಬೆಳಕಿಗೆ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಉದನಹಳ್ಳಿಯ ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣ ಎಂಬವರ ಪತ್ನಿ ಲೀಲಾವತಿ (22) ನಾಪತ್ತೆಯಾಗಿದ್ದರು. ಆಕೆಯ ಕುಟುಂಬಸ್ಥರು ಅಳಿಯನ ವಿರುದ್ಧ ಕೊಲೆ ಮಾಡಿದ್ದಾನೆಂಬ ಆರೋಪ ಮಾಡಿದ್ದರು. ಆದರೆ, ಆಕೆಯ ಮೊಬೈಲ್ ಟವರ್ ಲೊಕೇಶನ್ ತಿರುಪತಿಯಲ್ಲಿರುವುದಾಗಿ ತಿಳಿದು ಬಂದಿದೆ.
ಫೆ.23ರಂದು ರಾತ್ರಿ ಮುನಿಕೃಷ್ಣ ತಮ್ಮ ಸಹೋದರಿಯ ಪುತ್ರನ ಹುಟ್ಟುಹಬ್ಬದ ಸಮಾರಂಭಕ್ಕೆಂದು ಹೋಗಿದ್ದರು. ಇದೇ ವಿಚಾರಕ್ಕೆ ಲೀಲಾವತಿ ತಮ್ಮ ಪತಿಯೊಂದಿಗೆ ಜಗಳ ಮಾಡಿದ್ದಳು. ಆಗ ಮುನಿಕೃಷ್ಣ, ಪತ್ನಿಗೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಮರುದಿನ ಫೇಸ್ಬುಕ್ನಲ್ಲಿ ಪತ್ನಿಯ ಫೋಟೋ ಪೋಸ್ಟ್ ಮಾಡಿ ಶ್ರದ್ಧಾಂಜಲಿ ಕೋರಿದ್ದರು.
ಇದನ್ನು ಗಮನಿಸಿ ಭೀತಿಗೊಂಡ ಲೀಲಾವತಿಯ ಕುಟುಂಬಸ್ಥರು ಆಕೆಯನ್ನು ನೋಡಲೆಂದು ಬಂದರೆ ಆಕೆ ಮನೆಯಲ್ಲಿ ಇರಲಿಲ್ಲ. ಪರಿಣಾಮ ಅವರು ದೊಡ್ಡಬಳ್ಳಾಪುರದ ಮಹಿಳಾ ಠಾಣೆಯಲ್ಲಿ ಪುತ್ರಿಯನ್ನು ಅಳಿಯ ಕೊಲೆಗೈದಿರುವುದಾಗಿ ಪ್ರಕರಣ ದಾಖಲಿಸಿದ್ದರು.
ಹುಟ್ಟುಹಬ್ಬಕ್ಕೆ ಹೋಗಿದ್ದ ವಿಚಾರಕ್ಕೆ ಅಣ್ಣ-ಅತ್ತಿಗೆಯೊಳಗೆ ಜಗಳ ನಡೆದಿತ್ತು. ಮಾರನೆಯ ದಿನ ಬೆಳಗ್ಗೆ ಅತ್ತಿಗೆ ಬ್ಯಾಗ್ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಾರೆ. ಅಣ್ಣನ ಮೊಬೈಲ್ ಆಕೆಯ ಬಳಿಯೇ ಇದೆ. ಅತ್ತಿಗೆಯೇ ಅಣ್ಣನ ಫೇಸ್ಬುಕ್ ಅಕೌಂಟ್ನಲ್ಲಿ ಫೋಟೋ ಹಾಕಿ ಶ್ರದ್ಧಾಂಜಲಿ ಪೋಸ್ಟ್ ಮಾಡಿದ್ದಾರೆ ಎಂದು ಮುನಿಕೃಷ್ಣನ ಸಹೋದರ ಮುನಿರಾಜು ಪೊಲೀಸರಿಗೆ ಪ್ರತಿ ದೂರು ನೀಡಿದ್ದಾರೆ. ತನಿಖೆ ಆರಂಭಿಸಿರುವ ಮಹಿಳಾ ಪೊಲೀಸರಿಗೆ ನಾಪತ್ತೆಯಾಗಿರುವ ಮೊಬೈಲ್ ಲೊಕೇಷನ್ ತಿರುಪತಿಯಲ್ಲಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.