
ಕೇರಳ: ಅಗ್ನಿ ಅವಘಡದಿಂದ ಎಂಟು ತಿಂಗಳ ಹಸುಗೂಸು ಸೇರಿ ಐವರು ಸಜೀವ ದಹನ
Tuesday, March 8, 2022
ತಿರುವನಂತಪುರಂ(ಕೇರಳ): ಇಲ್ಲಿನ ದವಳಪುರಂನಲ್ಲಿ ನಸುಕಿನ ವೇಳೆ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ ಮಗು ಸೇರಿ ಐವರು ಸಜೀವವಾಗಿ ದಹನಗೊಂಡು ಮೃತಪಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರತಾಪನ್ (64), ಅವರ ಪತ್ನಿ ಶೇರ್ಲಿ (53), ಕಿರಿಯ ಮಗ ಅಖಿಲ್ (25), ಹಿರಿಯ ಮಗನ ಪತ್ನಿ ಅಭಿರಾಮಿ (24) ಮತ್ತು ಎಂಟು ತಿಂಗಳ ಮೊಮ್ಮಗ ರಾಯನ್ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ. ಮತ್ತೋರ್ವ ನಿಖಿಲ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ನಸುಕಿನ ವೇಳೆ 1.45ರ ಸುಮಾರಿಗೆ ವರ್ಕಳ ಸಮೀಪದ ಚೆರುನ್ನಿಯೂರಿನ ದವಳಪುರಂನಲ್ಲಿ ಪ್ರತಾಪನ್ ಎಂಬುವರ ಮನೆಯಲ್ಲಿ ಏಕಾಏಕಿ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ, ಐವರು ಮೃತಪಟ್ಟಿದ್ದಾರೆ. ಅಲ್ಲದೆ ಮನೆಯ ಹೊರಗಡೆ ನಿಲ್ಲಿಸಿದ್ದ ಕನಿಷ್ಠ ಐದು ಬೈಕ್ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿಯು ಮನೆಯನ್ನು ಸಂಪೂರ್ಣವಾಗಿ ಆವರಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಶಾರ್ಟ್ ಸರ್ಕ್ಯೂಟ್ ಅಗ್ನಿ ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದ್ದು, ತನಿಖೆ ನಡೆಯುತ್ತಿದೆ.