ಮಂಗಳೂರು: ಸಿಕ್ಕಿಂನ ಕಟಾವ್ - ಚೀನಾ ಗಡಿಯಲ್ಲಿ ನಿಂತು ತುಳುನಾಡ ಬಾವುಟ ಹಾರಿಸಿದ ಕರಾವಳಿಯ ಬೈಕ್ ರೈಡರ್ಸ್
Monday, April 18, 2022
ಮಂಗಳೂರು: ಕರಾವಳಿಯ ನಾಲ್ವರು ಬೈಕ್ ರೈಡರ್ಸ್ ಗಳು ಸಿಕ್ಕಿಂನ ಕಟಾವ್ ನಲ್ಲಿರುವ ಚೀನಾ ಗಡಿಯಲ್ಲಿ ನಿಂತು ತುಳುನಾಡಿನ ಬಾವುಟವನ್ನು ಹಾರಿಸಿ ಸಂಭ್ರಮ ಮೆರೆದಿದ್ದಾರೆ. ಇದಲ್ಲದೆ ಹಿಮಾಚಲ ಪ್ರದೇಶದ ಹಿಕ್ಕಿಂನಲ್ಲಿರುವ ವಿಶ್ವದ ಅತೀ ಎತ್ತರದ ಪೋಸ್ಟ್ ಆಫೀಸ್ ನಿಂದ ಪ್ರಧಾನಿ ಮೋದಿಯವರಿಗೆ 'ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ' ಮಾಡಬೇಕೆಂದು ಪತ್ರ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಸಮುದ್ರ ಮಟ್ಟದಿಂದ 15 ಸಾವಿರ ಅಡಿ ಎತ್ತರದಲ್ಲಿರುವ ಪೋಸ್ಟ್ ಆಫೀಸ್ ನಿಂದ ಪತ್ರವನ್ನು ಪೋಸ್ಟ್ ಮಾಡಿ ತಮ್ಮ ಭಾಷಾ ಪ್ರೇಮ ಮೆರೆದಿದ್ದಾರೆ.
ಖ್ಯಾತ ಯೂಟ್ಯೂಬರ್ ಸಚಿನ್ ಶೆಟ್ಟಿ, 'ಅನ್ನಿ' ಅರುಣ್, ಅರ್ಜುನ್ ಪೈ, ಸಾಯಿಕಿರಣ್ ಶೆಟ್ಟಿ ಹಾಗೂ ಅನ್ನಿ ಅರುಣ್ ಅವರ ಪತ್ನಿ ಭಾಗ್ಯಲಕ್ಷ್ಮಿಯವರು ಬೈಕ್ ರೈಡಿಂಗ್ ತಂಡದಲ್ಲಿದ್ದರು. ಈ ಬೈಕ್ ರೈಡರ್ಸ್ ತಂಡ ಸರಿ ಸುಮಾರು 9000 ಕಿ.ಮೀ. ದೂರ ಬೈಕ್ ರೈಡಿಂಗ್ ಮಾಡಿ ಈ ಸಾಧನೆ ಮಾಡಿದೆ. ಫೆ.26ರಂದು ಡೆಲ್ಲಿಯಿಂದ ಬೈಕ್ ರೈಡಿಂಗ್ ಆರಂಭಿಸಿರುವ ತಂಡ ಉತ್ತರ ಪ್ರದೇಶ, ಬಿಹಾರ್, ಸಿಕ್ಕಿಂ, ಕಟಾವ್(ಚೀನಾ ಬಾರ್ಡರ್), ಹಿಮಾಚಲ ಪ್ರದೇಶ, ಉತ್ತರಾಖಂಡ, ನೇಪಾಳ ಸಂಚರಿಸಿದೆ.
ಬಳಿಕ ಲಕ್ನೋ ಉತ್ತರ ಪ್ರದೇಶ, ಬಿಹಾರ್ ಮಾರ್ಗವಾಗಿ ಮರಳಿ ತಾಯ್ನಾಡಿಗೆ ಆಗಮಿಸಿದೆ. ಈ ಸಮಯ ಬೈಕ್ ರೈಡಿಂಗ್ ಗೆ ಅಷ್ಟೊಂದು ಪ್ರಶಸ್ತ ಕಾಲವಲ್ಲ. ಏಕೆಂದರೆ ಇದು ಅತ್ಯಂತ ಚಳಿಯ ಕಾಲವಾಗಿದ್ದು, ಹಿಮಪಾತವೂ ಇರುತ್ತದೆ. ಆದರೂ ಬೈಕ್ ರೈಡಿಂಗ್ ಹೊರಟ ಯುವಕರ ತಂಡ -12°C ಚಳಿಯಲ್ಲೂ ಹಿಮಪಾತಗಳ ಮಧ್ಯೆಯೂ ಬೈಕ್ ರೈಡಿಂಗ್ ಮಾಡಿ ತಮ್ಮ ಗುರಿಯನ್ನು ಮುಟ್ಟಿದೆ.
ಸುಮಾರು 52 ದಿನಗಳ ತಮ್ಮ ಬೈಕ್ ರೈಡಿಂಗ್ ನ ವೀಡಿಯೋವನ್ನು ಎಲ್ಲಾ ವಿವರಗಳ ಸಹಿತ ದಿನವೂ ತಮ್ಮ ಯೂಟ್ಯೂಬ್ ನಲ್ಲಿ ಸಚಿನ್ ಶೆಟ್ಟಿಯವರು ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ತಂಡ ತಮ್ಮ ಗುರಿಯನ್ನು ತಲುಪಿ ಮತ್ತೆ ತಾಯ್ನಾಡಿಗೆ ಮರಳಿದೆ. ಈ ತಂಡವನ್ನು ತುಳುನಾಡ ರಕ್ಷಣಾ ವೇದಿಕೆ ಸೇರಿದಂತೆ ಅನೇಕ ಅಭಿಮಾನಿಗಳು ಆದರ ಪೂರ್ವಕವಾಗಿ ಸ್ವಾಗತಿಸಿದೆ.