![ತಾಯಿಗೆ ಹಲ್ಲೆಗೈದು, ಜಗಳಕ್ಕೆ ನಿಂತ ತಂದೆಯನ್ನೇ ಹತ್ಯೆ ಮಾಡಿದ ಪುತ್ರ ತಾಯಿಗೆ ಹಲ್ಲೆಗೈದು, ಜಗಳಕ್ಕೆ ನಿಂತ ತಂದೆಯನ್ನೇ ಹತ್ಯೆ ಮಾಡಿದ ಪುತ್ರ](https://blogger.googleusercontent.com/img/b/R29vZ2xl/AVvXsEinY_ssIXA_R80b4kXA-H7swL6kDbsawFRGcI_vr47oHh2NZq09dE2IgIbFbhgqBqAdxZEQFQmvBa59eaNvWjfpsRH79gnAXmRfvdVEVtFo-6zNVGh_zGgHOf1209aPdozIdKvnvjGAKjBO/s1600/1662608904943966-0.png)
ತಾಯಿಗೆ ಹಲ್ಲೆಗೈದು, ಜಗಳಕ್ಕೆ ನಿಂತ ತಂದೆಯನ್ನೇ ಹತ್ಯೆ ಮಾಡಿದ ಪುತ್ರ
Thursday, September 8, 2022
ಬೆಳಗಾವಿ: ತಂದೆಯಿಂದ ಹಲ್ಲೆಗೊಳಗಾದ ತಾಯಿಯ ಚಿಕಿತ್ಸೆಗೆ ಮುಂದಾದ ಪುತ್ರನೊಂದಿಗೆ ಖ್ಯಾತೆ ತೆಗೆದ ತಂದೆಯನ್ನೇ ಪುತ್ರನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯಮಾರ್ಗದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಬೆಂಗಳೂರಿನ ಬಿಎಂಟಿಸಿ ಚಾಲಕನಾಗಿದ್ದ ರುದ್ರಪ್ಪ ತಳವಾರ ( 55 ) ಮೃತಪಟ್ಟವರು. ಪುತ್ರ ಸಂತೋಷ್ ಕೊಲೆ ಆರೋಪಿ.
ರುದ್ರಪ್ಪ ತಳವಾರ ಹಾಗೂ ಪತ್ನಿ ಮಲ್ಲೂರ ಗ್ರಾಮದ ಖಾಸಗಿ ಶಾಲೆಯ ಶಿಕ್ಷಕಿ ಮಹಾದೇವಿ ( 50 ) ನಡುವೆ ಯಾವುದೋ ಕಾರಣಕ್ಕೆ ಜಗಳ ನಡೆದಿದೆ. ಈ ವೇಳೆ ರುದ್ರಪ್ಪ ತಳವಾರ ಮಹಾದೇವಿಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಆಕೆಯ ಕಣ್ಣಿನ ಭಾಗದಲ್ಲಿ ಬಲವಾದ ಗಾಯವಾಗಿತ್ತು. ಆದ್ದರಿಂದ ಪುತ್ರ ಸಂತೋಷ್ ಇಬ್ಬರ ಜಗಳ ಬಿಡಿಸಿ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ.
ತನ್ನ ಬಳಿಯಲ್ಲಿದ್ದ ಹಣದಲ್ಲಿ ಔಷಧೋಪಚಾರ ಮಾಡಿಸಿ , ಸ್ಕ್ಯಾನಿಂಗ್ಗಾಗಿ ಮನೆಗೆ ಹಣ ತರಲು ಸಂತೋಷ್ ಬಂದಿರುವ ವೇಳೆ, ರುದ್ರಪ್ಪ ತಳವಾರ ಮದ್ಯದ ಮತ್ತಿನಲ್ಲಿ ಆಕೆ ಚಿಕಿತ್ಸೆ ಕೊಡದಿರುವಂತೆ ಜಗಳವಾಡಿದ್ದಾನೆ. ತಂದೆ ಹಾಗೂ ಪುತ್ರನ ಮಧ್ಯೆ ಮಾತಿಗೆ ಮಾತು ಬೆಳೆದು ಇಬ್ಬರು ಕೈ , ಕೈ ಮಿಲಾಯಿಸಿ ಜಗಳವಾಡಿದ್ದಾರೆ. ಸಿಟ್ಟಿನ ಭರದಲ್ಲಿ ಸಂತೋಷ್ ಮಚ್ಚಿನಿಂದ ತಂದೆ ರುದ್ರಪ್ಪನ ಕುತ್ತಿಗೆ , ಕಣ್ಣಿಗೆ ಏಟು ಹಾಕಿದ್ದರಿಂದ ಸ್ಥಳದಲ್ಲೇ ರುದ್ರಪ್ಪ ಮೃತಪಟ್ಟಿದ್ದಾನೆ . ಆರೋಪಿ ಸಂತೋಷನನ್ನು ಬಂಧಿಸಲಾಗಿದೆ . ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಕಟಗಿ , ಸಿಪಿಐ ಉಳವಪ್ಪ ಸಾತೆನಹಳ್ಳಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.