
ಅತ್ಯಾಚಾರ ಪ್ರಕರಣ ದಾಖಲಿಸದ ಪೊಲೀಸರು: ಠಾಣೆಯ ಮುಂಭಾಗವೇ ಸಂತ್ರಸ್ತೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನ
Monday, September 5, 2022
ಶಾದೋಳ್: ದೂರು ದಾಖಲಿಸಿದರೂ ಅತ್ಯಾಚಾರ ಪ್ರಕರಣವನ್ನು ದಾಖಲಿಸದ ಪೊಲೀಸ್ ಠಾಣೆಯ ಆವರಣದಲ್ಲಿಯೇ 26ರ ಹರೆಯದ ಸಂತ್ರಸ್ತ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಾದೋಳ್ನ ಅಮಾಯಿಯಲ್ಲಿ ಸಂಭವಿಸಿದೆ.
ತೀವ್ರ ಸುಟ್ಟಗಾಯಗೊಂಡಿರುವ ಆಕೆಯನ್ನು ಜಬಲ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ತವ್ಯ ಲೋಪ ಎಸಗಿರುವ ಅಮಾಯಿ ಠಾಣಾಧಿಕಾರಿ ಮುಹಮ್ಮದ್ ಸಮೀರ್ ಮತ್ತು ಸಬ್ - ಇನ್ಸ್ ಪೆಕ್ಟರ್ ಸಾವಿತ್ರಿ ಸಿಂಗ್ ಅವರನ್ನು ಕ್ಷೇತ್ರ ಕರ್ತವ್ಯಗಳಿಂದ ತೆರವುಗೊಳಿಸಿ ಪೊಲೀಸ್ ಲೈನ್ಸ್ನಲ್ಲಿ ನಿಯೋಜಿಸಲಾಗಿದೆ. ಘಟನೆಯ ಬಳಿಕ ಯುವತಿಯ ದೂರಿನ ಮೇರೆಗೆ ಕಂದಾಯ ಅಧಿಕಾರಿ ಬ್ರಿಜ್ ಬಹದೂರ್ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆರೋಪಿಯು ಮದುವೆಯ ಭರವಸೆ ನೀಡಿ ತನ್ನೊಂದಿಗೆ ಸಂಬಂಧ ಹೊಂದಿದ್ದ. ಆದರೆ ಆ ಬಳಿಕ ಮದುವೆಗೆ ನಿರಾಕರಿಸಿದ್ದಾನೆ ಎಂದು ಆರೋಪಿಸಿ ಯುವತಿ ಆ.12 ರಂದು ಪೊಲೀಸ್ ದೂರು ದಾಖಲಿಸಿದ್ದಳು. ಆದರೆ ಪೊಲೀಸರು ಎಫ್ಐಆರ್ ದಾಖಲಿಸಿರಲಿಲ್ಲ. ಯುವತಿ ಬಳಿಕ ಸಿಎಂ ಸಹಾಯವಾಣಿಗೂ ದೂರು ಸಲ್ಲಿಸಿದ್ದಳು. ಆ ಬಳಿಕ ಪೊಲೀಸರು ಆಕೆಯನ್ನು ಸೆ .2 ರಂದು ಠಾಣೆಗೆ ಕರೆಸಿದ್ದರು. ಆದರೆ ಅದೇ ದಿನ ಠಾಣೆಯ ಆವರಣದಲ್ಲಿ ಆಕೆ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾಳೆ.