ಪತ್ನಿ ಕಾಟಕ್ಕೆ ಬೇಸತ್ತ ಪತಿ ತಪ್ಪಿಸಿಕೊಳ್ಳಲು ಹೋಗಿ 26ಲಕ್ಷದೊಂದಿಗೆ ಪೊಲೀಸ್ ಕೈಗೆ ಸಿಕ್ಕಿಬಿದ್ದ
Sunday, April 2, 2023
ಬೆಳಗಾವಿ: ಮನೆಯಲ್ಲಿ ಪತ್ನಿಯ ಕಾಟದಿಂದ ತಪ್ಪಿಸಲು ಲಕ್ಷಾಂತರ ರೂ. ಹಣದೊಂದಿಗೆ ಗೋವಾ ಪ್ರವಾಸ ಹೊರಟ ಉದ್ಯಮಿಯನ್ನು ಬೆಳಗಾವಿ ಪೊಲೀಸರು ಮಾರ್ಗಮಧ್ಯೆ ತಡೆದ ಪರಿಣಾಮ ಆತ ವಿಚಾರಣೆ ಎದುರಿಸುವಂತಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. 50 ಸಾವಿರ ರೂ.ಗಿಂತ ಹೆಚ್ಚಿನ ಹಣ ತೆಗೆದುಕೊಂಡು ಹೋದರೆ ಸೂಕ್ತ ದಾಖಲಾತಿಯನ್ನು ಒದಗಿಸಬೇಕು. ಇಲ್ಲದಿದ್ದರೆ, ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಇದರಂತೆ, ಮುಂಬೈ ಉದ್ಯಮಿಯೊಬ್ಬರು 26 ಲಕ್ಷ ರೂ. ಹಣದೊಂದಿಗೆ ಸಂಚರಿಸುತ್ತಿದ್ದ ವೇಳೆ ಬೆಳಗಾವಿ ಪೊಲೀಸರು ನಗದು ಸಮೇತ ವಶಕ್ಕೆ ಪಡೆದಿದ್ದಾರೆ.
ಮುಂಬೈ ಮಾರ್ಗವಾಗಿ ಗೋವಾಕ್ಕೆ ಹೊರಟಿದ್ದ ಉದ್ಯಮಿ ಆನ್ಲೈನ್ ಮ್ಯಾಪ್ ಹಾಕಿಕೊಂಡು ಸಂಚಾರ ನಡೆಸಿದ್ದರು. ಆದರೆ, ಮ್ಯಾಪ್ ತಪ್ಪಾದ ರಸ್ತೆಮಾರ್ಗ ತೋರಿಸಿದ್ದು, ಬೆಳಗಾವಿ ನಗರಕ್ಕೆ ಬಂದಿದ್ದಾರೆ. ನಗರದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಸಿಕ್ಕಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರಲ್ಲಿ 26 ಲಕ್ಷ ರೂ. ನಗದು ದೊರಕಿದೆ. ಇಷ್ಟೊಂದು ಹಣದೊಂದಿಗೆ ಎಲ್ಲಿಗೆ ಸಂಚಾರ ಮಾಡುತ್ತಿದ್ದೀರಿ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಆಗ ಉದ್ಯಮಿಯು, ನಾನು ಮುಂಬೈ ಮೂಲದ ಉದ್ಯಮಿ. ಮನೆಯಲ್ಲಿ ಹೆಂಡತಿ ಕಾಟ ತಾಳಲಾರದೆ ಗೋವಾಗೆ ಹೊರಟಿದ್ದೆ. ಆನ್ಲೈನ್ ಮ್ಯಾಪ್ ಹಾಕಿಕೊಂಡು ಕಾರು ಓಡಿಸುತ್ತಿದ್ದೆ. ಆದರೆ, ಬೆಳಗಾವಿ ನಗರಕ್ಕೆ ಇದು ಕರೆದುಕೊಂಡು ಬಂದಿದೆ ಎಂದು ಹೇಳಿದ್ದಾರೆ. ಎನ್ನಲಾಗಿದೆ. ಬೆಳಗಾವಿ ಪೊಲೀಸ್ ಠಾಣೆಯಲ್ಲಿ ಹಣದ ಮೂಲದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.