ನಿವೇಶನ ಕೊಡಿಸುವುದಾಗಿ ನಂಬಿಸಿ 18.50 ಲಕ್ಷ ವಂಚನೆ: ದೂರು ದಾಖಲಿಸಿದ ಮಾಸ್ಟರ್ ಆನಂದ್
Monday, June 26, 2023
ಬೆಂಗಳೂರು: ಸ್ಯಾಂಡಲ್ ವುಡ್ ನಟ ಮಾಸ್ಟರ್ ಆನಂದ್ ಅವರು ನಿವೇಶನ ಕೊಡಿಸುವುದಾಗಿ ಹೇಳಿ ತನಗೆ ವಂಚನೆ ಮಾಡಲಾಗಿದೆ ಎಂದು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿವೇಶನ ಕೊಡಿಸುವುದಾಗಿ ಖಾಸಗಿ ಸಂಸ್ಥೆಯೊಂದು 18.50 ಲಕ್ಷ ರೂ. ಅನ್ನು ಮಾಸ್ಟರ್ ಆನಂದ್ ರಿಂದ ಪಡೆದಿತ್ತು. ಆದರೆ ನಿವೇಶನ ನೀಡದೆ, ಮುಂಗಡ ಹಣವನ್ನೂ ವಾಪಸ್ ಕೊಡದೇ ವಂಚನೆ ಮಾಡಿದ್ದಾರೆ ಎಂದು ಅವರು ಪೊಲೀಸ್ ದೂರು ದಾಖಲಿಸಿದ್ದಾರೆ 2020ರ ಸೆಪ್ಟೆಂಬರ್ ನಿಂದ 2021ರ ಅಕ್ಟೋಬರ್ ಅವಧಿಯಲ್ಲಿ ಈ ವಂಚನೆ ನಡೆದಿದೆ ಎನ್ನಲಾಗಿದೆ.
ಚಿತ್ರೀಕರಣಕ್ಕೆ ತೆರಳಿದ್ದ ಸಂದರ್ಭ ಮಾಸ್ಟರ್ ಆನಂದ್ ಕೆಲವು ನಿವೇಶನಗಳನ್ನು ವೀಕ್ಷಿಸಿದ್ದರು. ಅದರಲ್ಲಿ ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ನಿವೇಶನವೊಂದನ್ನು ಆನಂದ್ ನೋಡಿದ್ದರು. ಈ ಸಂದರ್ಭ ಖಾಸಗಿ ಕಂಪನಿಯವರು, ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರೋದಾಗಿ ಹೇಳಿದ್ದು ಆ ಬಳಿಕ ರಾಮಸಂದ್ರದ 2000 ಸಾವಿರ ಅಡಿ ವಿಸ್ತೀರ್ಣದ ನಿವೇಶನ ತೋರಿಸಿದ್ದರು. 70 ಲಕ್ಷಕ್ಕೆ ಖರೀದಿಗೆ ಒಪ್ಪಂದವಾಗಿತ್ತು. ಆದ್ದರಿಂದ ಹಂತ ಹಂತವಾಗಿ ಮಾಸ್ಟರ್ ಆನಂದ್ 18.5 ಲಕ್ಷ ರೂ. ಮುಂಗಡ ಹಣವನ್ನು ಕಂಪನಿಗೆ ನೀಡಿದ್ದರು ಎನ್ನಲಾಗಿದೆ.
ಮಾಸ್ಟರ್ ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ಹೆಸರಲ್ಲಿ ಈ ಕಂಪೆನಿ ನಿವೇಶನ ಖರೀದಿಗೆ ಕರಾರು ಪತ್ರ ಕೂಡ ಮಾಡಿಕೊಟ್ಟಿತ್ತು. ಆದರೆ ಈ ನಡುವೆ ನಿವೇಶನವನ್ನು ಕಂಪೆನಿಗೆ ಬೇರೆಯವರಿಗೆ ಮಾರಾಟ ಮಾಡಿತ್ತು. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸ್ಪಂದನೆ ನೀಡದೆ ಮುಂಗಡ ಹಣವನ್ನೂ ವಾಪಸ್ ಮಾಡಲಿಲ್ಲ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಿಯುಡಿಎಸ್ ಕಾಯ್ದೆ 2019ರ ಕಾಯ್ದೆಯಡಿ ಆರೋಪಿಗಳ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.