ಮಂಗಳೂರು: ಮೋಜಿಗಾಗಿ ಯುವತಿಯೊಬ್ಬಳನ್ನು ರೆಸಾರ್ಟ್ ಗೆ ಕರೆದೊಯ್ದ ಕೇರಳ ಉದ್ಯಮಿಗಳು: ಮುಂದೇನಾಯ್ತು ಗೊತ್ತೇ?
Wednesday, June 28, 2023
ಮಂಗಳೂರು: ಮೋಜಿಗಾಗಿ ಹೆಣ್ಣೊಬ್ಬಳನ್ನು ರೆಸಾರ್ಟ್ ಗೆ ಕರೆದೊಯ್ದ ಕೇರಳದ ಉದ್ಯಮಿಗಳಿಬ್ಬರು ಭಾರೀ ಸಮಸ್ಯೆಗೆ ಸಿಲುಕಿ ಪೀಕಲಾಟ ಅನುಭವಿಸಿದ್ದಾರೆ. ಅಲ್ಲದೆ ತಾವು ದುಡಿದು ಸಂಪಾದಿಸಿದ ಲಕ್ಷಾಂತರ ಹಣವನ್ನೂ ಕಳೆದುಕೊಂಡಿದ್ದಾರೆ.
ಹೌದು... ಕೇರಳದ ಉದ್ಯಮಿಗಳು ಮಂಗಳೂರಿನಲ್ಲಿ ಹನಿಟ್ರ್ಯಾಪ್ ಗೊಳಗಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಂಡವೊಂದು ಈ ಇಬ್ಬರನ್ನು ಹನಿಟ್ರ್ಯಾಪ್ ಮಾಡಿ ಬೆದರಿಕೆಯೊಡ್ಡಿರುವ ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಯುವತಿ ಸೇರಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಬೊಂದೇಲ್ ನಿವಾಸಿ ಪ್ರೀತಮ್(29), ಮೂಡುಶೆಡ್ಡೆ ಪರಿಸರ ನಿವಾಸಿಗಳಾದ ಕಿಶೋರ್(32), ಮುರಳಿ ಕೃಷ್ಣ(26), ಸುಶಾಂತ್(23), ಲಿಖಿತ್(23), ತರುಣ್(20), ಅಭಿ(24) ಸೇರಿದಂತೆ ಮೂಡುಬಿದಿರೆ ಮೂಲದ ಯುವತಿ ಬಂಧಿತ ಆರೋಪಿಗಳು.
ಫೆಬ್ರವರಿ 16ರಂದು ವಾಮಂಜೂರು ಬಳಿಯ ಮೂಡುಶೆಡ್ಡೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಉದ್ಯಮಿ ಹನಿಟ್ರ್ಯಾಪ್ ಗೊಳಗಾಗಿದ್ದಾರೆ. ಕೇರಳ ಮೂಲದ ಮೊಯ್ದಿನ್ ಕುಂಞ(45) ಮತ್ತು ಮೊಹಮ್ಮದ್ ರುಕ್ಸಾದ್ ಎಂಬವರು ತಮ್ಮ ಸಂಪರ್ಕಕ್ಕೆ ಬಂದಿದ್ದ ಮೂಡುಬಿದಿರೆ ಮೂಲದ ಯುವತಿಯೊಂದಿಗೆ ರೆಸಾರ್ಟ್ ಗೆ ತೆರಳಿದ್ದರು. ರಾತ್ರಿ ವೇಳೆ ಅವರು ರೆಸಾರ್ಟ್ ನಲ್ಲಿದ್ದಾಗಲೇ ತಂಡವೊಂದು ಕೊಠಡಿಗೆ ಏಕಾಏಕಿ ಪ್ರವೇಶಿದೆ. ತಂಡದ ಯುವಕರು ಅಲ್ಲಿನ ದೃಶ್ಯಗಳನ್ನು ಫೋಟೋ, ವಿಡಿಯೋ ಮಾಡಿದ್ದಾರೆ. ಬಳಿಕ ಉದ್ಯಮಿ ಮೊಯ್ದಿನ್ ಕುಂಞಗೆ ಹಲ್ಲೆಗೈದು ಹಣಕ್ಕಾಗಿ ಪೀಡಿಸಿದ್ದಾರೆ. ಅಲ್ಲದೆ, ಇಂತಿಷ್ಟು ಹಣ ಕೊಟ್ಟಲ್ಲಿ ಮಾತ್ರ ಬಿಡ್ತೀವಿ, ಇಲ್ಲಾಂದ್ರೆ ವಿಡಿಯೋವನ್ನು ವೈರಲ್ ಮಾಡುತ್ತೇವೆಂದು ಧಮ್ಕಿ ಹಾಕಿದ್ದಾರೆ. ಬೆದರಿದ ಮೊಯ್ದಿನ್ ಕುಂಞ ತಮ್ಮಲ್ಲಿದ್ದ ಹಣವನ್ನು ಕೊಟ್ಟು ಅಲ್ಲಿಂದ ಪಾರಾಗಿ ಬಂದಿದ್ದರು.
ಆದರೆ ಯುವಕರ ತಂಡ ಪದೇಪದೇ ಅವರಿಗೆ ಕರೆ ಮಾಡಿ, ಹಣಕ್ಕಾಗಿ ಪೀಡಿಸಿದ್ದಾರೆ. ಗೂಗಲ್ ಪೇ, ಬ್ಯಾಂಕ್ ಅಕೌಂಟ್ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದರು. ಮೂರು ತಿಂಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡ ಮೊಯ್ದಿನ್ ಕುಂಞ ತಂಡದ ಬೆದರಿಕೆಗೆ ಬೇಸತ್ತು ಇತ್ತೀಚೆಗೆ ಕಾವೂರು ಠಾಣೆಗೆ ತೆರಳಿ ದೂರು ನೀಡಿದ್ದರು. ಕಮಿಷನರ್ ಸೂಚನೆಯಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ. ಯುವತಿ ಹಾಗೂ ಹನಿಟ್ರ್ಯಾಪ್ ತಂಡದ ಯುವಕರಿಗೆ ಸಂಪರ್ಕ ಇದೆ ಎಂಬುದು ತಿಳಿದು ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳ ಪೈಕಿ ಪ್ರೀತಂ ಎಂಬಾತನ ವಿರುದ್ಧ ಈ ಹಿಂದೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಮಂಗಳೂರು ಪೂರ್ವ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಇನ್ನೋರ್ವ ಆರೋಪಿ ಕಿಶೋರ್ ಎಂಬಾತನ ವಿರುದ್ಧ ಈ ಹಿಂದೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ಸುಶಾಂತ್ ಎಂಬಾತನ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.