ಮಂಗಳೂರು: 17ನೇ ಮಹಡಿಯಿಂದ ಹಾರಿ ಉದ್ಯಮಿ ಸಾವು - ಬಿದ್ದ ರಭಸಕ್ಕೆ ಛಿದ್ರಗೊಂಡ ತಲೆ
Sunday, August 6, 2023
ಮಂಗಳೂರು: ತಾನಿರುವ ಫ್ಲ್ಯಾಟ್ ನ 17ನೇ ಮಹಡಿಯಿಂದ ಹಾರಿ ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ನಗರದ ಬೆಂದೂರು ವೆಲ್ ನಲ್ಲಿ ಅಟ್ಲಾಂಟಿಕ್ ಅಪಾರ್ಟೆಂಟ್ ನಲ್ಲಿ ನಡೆದಿದೆ.
ನಗರದಲ್ಲಿ ಕ್ವಾರೆ ಉದ್ದಿಮೆ ಹಾಗೂ ಬಿಲ್ಡರ್ ಆಗಿರುವ ಮೋಹನ್ ಅಮೀನ್ (62) ಆತ್ಮಹತ್ಯೆ ಮಾಡಿಕೊಂಡವರು.
ಈ ಘಟನೆ ರವಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ. ಮನೆಯಿಂದ ಹೊರಗಡೆ ಹೋಗಿದ್ದ ಮೋಹನ್ ಅಮೀನ್ ತಮ್ಮ ಫ್ಲ್ಯಾಟ್ ಇರುವ ಅಟ್ಲಾಂಟಿಕ್ ಅಪಾರ್ಟೆಂಟ್ ಬಳಿಗೆ ತಿರುಗಿ ಬಂದಿದ್ದಾರೆ. ಬಳಿಕ 17ನೇ ಮಹಡಿಗೆ ಹೋಗಿ ಅಲ್ಲಿಂದ ಕೆಳಕ್ಕೆ ಹಾರಿದ್ದಾರೆ ಎನ್ನಲಾಗುತ್ತಿದೆ. ಬಿದ್ದ ರಭಸಕ್ಕೆ ತಲೆ ಸಂಪೂರ್ಣ ಛಿದ್ರಗೊಂಡಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯವಾಹಿನಿ ಹೆಸರಿನ ಟಿಪ್ಪರ್, ಕ್ವಾರೆ, ಜಲ್ಲಿಕಲ್ಲು ಬಿಸಿನೆಸ್ ಹೊಂದಿದ್ದ ಮೋಹನ್ ಅಮೀನ್ ಅವರು ನಗರದ ಮಲ್ಲಿಕಟ್ಟೆಯಲ್ಲಿ ಕಚೇರಿ ಹೊಂದಿದ್ದರು.
ಮೋಹನ್ ಅಮೀನ್ ಅವರು ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ "ತನ್ನ ಸಾವಿಗೆ ತಾನೇ ಕಾರಣ. ಪತ್ನಿ, ಮಕ್ಕಳಲ್ಲಿ ಕ್ಷಮಿಸಿ'' ಎಂದಷ್ಟೇ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.