ಬಾಣಂತಿ ಯುವತಿಗೆ ಖಾಲಿ ಸಿರಿಂಜ್ ಇಂಜೆಕ್ಟ್ ಮಾಡಿ ಕೊಲೆಗೆತ್ನಿಸಿದ ಕಟುಕಿ: ತನಿಖೆಯಲ್ಲಿ ಕಾಲೇಜು ದಿನಗಳ ಪ್ರೀತಿ - ಪ್ರಣಯದ ರಹಸ್ಯ ಬಯಲು
Sunday, August 6, 2023
ಕೊಚ್ಚಿ: ನರ್ಸ್ ವೇಷತೊಟ್ಟು ಆಸ್ಪತ್ರೆಗೆ ಬಂದು ಯುವತಿಯೊಬ್ಬಳನ್ನು ಕೊಲ್ಲಲು ಯತ್ನಿಸಿದ ಹಂತಕಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಪ್ರಸವದ ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಕೆ ಈ ಕೊಲೆ ಯತ್ನಕ್ಕೆ ಕೈ ಹಾಕಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿದಾಗ ಕೃತ್ಯ ಹಿಂದಿನ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.
ಆಲಪ್ಪುಝಾ ಜಿಲ್ಲೆಯ ಕಾಯಂಕುಲಂ ಪುಲ್ಲುಕುಲಂಗರ ಮೂಲದ ಅನುಷಾ (27) ನರ್ಸ್ ವೇಷದಲ್ಲಿ ಬಂದಾಕೆ. ಕಾಯಂಕುಲಂನ ಕರಿಯಿಲಕುಳಂಗರ ಮೂಲದ ಸ್ನೇಹಾ (25) ಎಂಬಾಕೆ ಕೂದಲೆಳೆಯ ಅಂತರದಲ್ಲಿ ಕೊಲೆಯತ್ನದಿಂದ ಪಾರಾದವಳು.
ಅನುಷಾ ಮೆಡಿಸಿನ್ ಇಲ್ಲದ ಸಿರಿಂಜ್ ಮೂಲಕ ಅಪಧಮನಿಗಳಿಗೆ ಗಾಳಿಯನ್ನು ತುಂಬಿ ಸ್ನೇಹಾ ಕೊಲೆಗೆ ಯತ್ನಿಸಿದ್ದಾಳೆ. ಮೂರು ಬಾರಿ ಸಿರಿಂಜ್ ಅನ್ನು ಅನುಷಾ, ಬಾಣಂತಿ ಸ್ನೇಹಾಗೆ ಇಂಜೆಕ್ಟ್ ಮಾಡಿದ್ದಾಳೆ. ನರ್ಸ್ ಯೂನಿಫಾರ್ಮ್, ವೇಲ್ ಮತ್ತು ಮಾಸ್ಕ್ ಧರಿಸಿ ಬಂದು ಅನುಷಾ ಈ ಕೃತ್ಯವನ್ನು ಎಸಗಿದ್ದಾಳೆ.
ಅಂದಹಾಗೆ ಸ್ನೇಹಾಳ ಪತಿ ಅರುಣ್ ಮೇಲೆ ಅನುಷಾಗೆ ಪ್ರೀತಿಯಿತ್ತು. ಅರುಣ್ ಮತ್ತು ಅನುಷಾ ಕಾಲೇಜು ದಿನಗಳಿಂದಲೂ ಲವ್ ಮಾಡುತ್ತಿದ್ದರು ಎಂಬ ರಹಸ್ಯ ಈ ತನಿಖೆಯಲ್ಲಿ ಬಯಲಾಗಿದೆ. ಸ್ನೇಹಾಳನ್ನು ಕೊಂದು ಅರುಣ್ನನ್ನು ಪಡೆದುಕೊಳ್ಳುವುದು ಆಕೆಯ ದುರುದ್ದೇಶವಾಗಿತ್ತು. ಹೀಗಾಗಿ ಅರುಣ್ ಆಸ್ಪತ್ರೆಯಲ್ಲಿ ಇಲ್ಲದ ಸಂದರ್ಭ ನೋಡಿ ಸ್ನೇಹಾ ಕೊಲೆಗೆ ಯತ್ನಿಸಿದ್ದಾಳೆ. ಅನುಷಾ ಬಂದಾಗ ವಾರ್ಡ್ನಲ್ಲಿ ಸ್ನೇಹಾ ಮತ್ತು ಆಕೆಯ ತಾಯಿ ಮಾತ್ರ ಇದ್ದರು ಎಂದು ಸ್ನೇಹಾ ಸಂಬಂಧಿಕರು ತಿಳಿಸಿದ್ದಾರೆ
ಅನುಷಾ ಮಾಡಿದ ಕೃತ್ಯದಿಂದ ಸ್ನೇಹಾ ಹೃದಯಾಘಾತದಿಂದ ಬಳಲಿದ್ದಾಳೆ. ಆದರೆ, ಸೂಕ್ತ ಸಮಯದಲ್ಲಿ ವೈದ್ಯರಿಗೆ ತಿಳಿಸಿದ್ದಕ್ಕೆ ಸ್ನೇಹಾಳ ಆರೋಗ್ಯ ಸ್ಥಿತಿ ಈಗ ಸಮಾಧಾನಕರವಾಗಿದೆ. ಅಚ್ಚರಿಯ ಸಂಗತಿಯೇನೆಂದರೆ, ಆರೋಪಿ ಅನುಷಾ ಈಗಾಗಲೇ ಎರಡು ಮದುವೆ ಆಗಿದ್ದಾಳೆ. ಆಕೆಯ ಎರಡನೇ ಪತಿ ವಿದೇಶದಲ್ಲಿದ್ದಾನೆ. ಆಕೆ ಫಾರ್ಮಾಸಿಸ್ಟ್ ಕೋರ್ಸ್ ಮುಗಿಸುವುದರಿಂದ ಆಕೆ ಸಂಚು ಮಾಡಿ ಕೊಲೆ ಪ್ರಯತ್ನ ನಡೆಸಿದ್ದಾಳೆ. ಆಕೆಯನ್ನು ಬಂಧಿಸಿರುವ ಕೇರಳ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.