ರೀಲ್ಸ್ ಹುಚ್ಚಿಗೆ ಪತಿಯಿಂದಲೇ ಪತ್ನಿ ಬಲಿ : ಅಳಿಯನಿಗೆ ಮಾವ ಸಾಥ್
Friday, August 11, 2023
ಮಂಡ್ಯ: ರೀಲ್ಸ್ ವ್ಯಾಮೋಹವು ಯುವತಿಯ ಪ್ರಾಣವನ್ನೇ ಕಸಿದಿದೆ. ಈಕೆಯ ರೀಲ್ಸ್ ಹುಚ್ಚಿನಿಂದ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾದ ಹಿನ್ನೆಲೆಯಲ್ಲಿ ಈಕೆ ತನ್ನ ಪತಿಯಿಂದಲೇ ಬರ್ಬರ ಹತ್ಯೆಯಾಗಿದ್ದಾಳೆ. ಈ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲಿನಲ್ಲಿ ನಡೆದಿದೆ.
ಪೂಜಾ (26) ಮೃತ ಯುವತಿ. ಈಕೆಯ ಪತಿ ಶ್ರೀನಾಥ್ (36) ಹತ್ಯೆ ಮಾಡಿರುವ ಆರೋಪಿ.
ಪೂಜಾ ಯಾವಾಗಲೂ ರೀಲ್ಸ್ನಲ್ಲಿ ಮುಳುಗಿರುತ್ತಿದ್ದಳು. ಅಲ್ಲದೆ, ತನ್ನ ಸ್ನೇಹಿತರೊಂದಿಗೂ ಚಾಟಿಂಗ್ ಮಾಡುತ್ತಿದ್ದಳು. ಯಾವಾಗಲೂ ಮೊಬೈಲ್ನಲ್ಲಿ ಮುಳುಗಿರುತ್ತಿದ್ದ ಪೂಜಾಳನ್ನು ಕಂಡು ಪತಿಗೆ ಸಂಶಯ ಉಂಟಾಗಿದೆ. ಪರಪುರುಷನೊಂದಿಗೆ ತನ್ನ ಪತ್ನಿಗೆ ಅನೈತಿಕ ಸಂಬಂಧ ಇರಬಹುದೆಂಬ ಅನುಮಾನ ಉಂಟಾಗಿದೆ. ಇದೇ ಅನುಮಾನ ಪ್ರೀತಿಸಿ ವಿವಾಹವಾಗಿದ್ದ ಪತ್ನಿಯನ್ನೇ ಕೊಲೆ ಮಾಡುವ ಹಂತಕ್ಕೆ ತಂದು ನಿಲ್ಲಿಸಿದೆ. ಅದಕ್ಕಾಗಿ ಈತ ವೇಲ್ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ 3 ದಿನ ಬಳಿಕ 102ಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ಪೂಜಾ ಹಾಗೂ ಶ್ರೀನಾಥ್, 9 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಒಂದು ಹೆಣ್ಣು ಮಗುವೂ ಇದೆ. ಆದರೆ, ಹಲವು ವರ್ಷಗಳಿಂದ ಪೂಜಾ ರೀಲ್ಸ್ ಮತ್ತು ಶಾರ್ಟ್ಸ್ ಮೇಲಿನ ವ್ಯಾಮೋಹವನ್ನು ಬೆಳೆಸಿಕೊಂಡಿದ್ದಳು. ರೀಲ್ಸ್ ನೊಂದಿಗೆ ಬಹಳಷ್ಟು ಹೊತ್ತು ಫೋನ್ ಬಳಸುತ್ತಿದ್ದಳು. ಅತಿಯಾದ ಫೋನ್ ಬಳಕೆಯಿಂದ ದಾಂಪತ್ಯದಲ್ಲಿ ಬಿರುಕು ಮೂಡಿ ಪತಿ - ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪರಪುರುಷರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆಂದು ಅನುಮಾನ ವ್ಯಕ್ತಪಡಿಸಿ ಶ್ರೀನಾಥ್ ಯಾವಾಗಲೂ ಗಲಾಟೆ ಮಾಡುತ್ತಿದ್ದ. ಇದೇ ಜಗಳ ಮೂರು ದಿನಗಳ ಹಿಂದೆ ತಾರಕಕ್ಕೇರಿ ತಾಳ್ಮೆ ಕಳೆದುಕೊಂಡ ಶ್ರೀನಾಥ್, ವೇಲ್ನಿಂದ ಪೂಜಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಕೊಲೆಯ ಬಳಿಕ ಮೃತದೇಹ ಸಾಗಿಸಲು ಮಾವನೇ ಅಳಿಯನಿಗೆ ಸಾಥ್ ನೀಡಿದ್ದಾರೆ. ಅಳಿಯನೊಂದಿಗೆ ಸೇರಿ ತನ್ನ ಪುತ್ರಿಯ ಮೃತದೇಹವನ್ನು ಕಾವೇರಿ ನದಿಗೆ ಎಸೆದು ಬಂದಿದ್ದರು. ಇದಕ್ಕೂ ಮೊದಲು ಕೊಲೆಗೈದ ಬಳಿಕ ಶ್ರೀನಾಥ್, ತನ್ನ ಮಾವ ಶೇಖರ್ಗೆ ಕರೆ ಮಾಡಿ, ಕೊಲೆ ಮಾಡಿರುವುದನ್ನು ತಿಳಿಸಿದ್ದ. ಪುತ್ರಿಯ ಕೊಲೆ ಬಗ್ಗೆ ತಿಳಿದರೂ ಅದನ್ನು ಪೊಲೀಸರಿಗೆ ಹೇಳದೆ ಅಳಿಯನಿಗೆ ಶೇಖರ್ ಸಾಥ್ ನೀಡಿದ್ದಾರೆ. ಮನೆಯಿಂದ ಬೈಕ್ ನಲ್ಲಿ ಮೃತದೇಹ ಸಾಗಿಸಿ, ಬಳಿಕ ಮೃತದೇಹಕ್ಕೆ ಭಾರವಾದ ಕಲ್ಲು ಕಟ್ಟಿ ನದಿಗೆ ಎಸೆದು ಬಂದಿದ್ದಾರೆ.