-->
ಮಂಗಳೂರು: 15 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಯಿಂದ ಮತ್ತೆ ಡ್ರಗ್ಸ್ ಮಾರಾಟ ದಂಧೆ - ಇಬ್ಬರು ಖದೀಮರು ಸಿಸಿಬಿ ಬಲೆಗೆ

ಮಂಗಳೂರು: 15 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಯಿಂದ ಮತ್ತೆ ಡ್ರಗ್ಸ್ ಮಾರಾಟ ದಂಧೆ - ಇಬ್ಬರು ಖದೀಮರು ಸಿಸಿಬಿ ಬಲೆಗೆ


ಮಂಗಳೂರು: ಮಾದಕದ್ರವ್ಯ ಮಾರಾಟ ದಂಧೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ಸೇರಿದಂತೆ ಮತ್ತೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ.

ಉಪ್ಪಿನಂಗಡಿ, ತೆಕ್ಕಾರು ನಿವಾಸಿ ಪಿ.ಎಸ್. ಅಬ್ದುಲ್ ಅಜೀಜ್(31), ಸುರತ್ಕಲ್, ಕಾಟಿಪಳ್ಳ 3ನೇ ಬ್ಲಾಕ್, ಆಶ್ರಯ ಕಾಲನಿ ನಿವಾಸಿ ಅಕ್ಷಿತ್ ಕುಮಾರ್(26) ಬಂಧಿತ ಆರೋಪಿಗಳು.

ಅಬ್ದುಲ್ ಅಜೀಜ್ ಹಾಗೂ ಅಕ್ಷಿತ್ ಕುಮಾರ್ ನಗರದ ಕೆ ಎಸ್ ರಾವ್ ರಸ್ತೆಯಲ್ಲಿ ಮಾದಕದ್ರವ್ಯ ಎಂಡಿಎಂಎಯನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಅಲ್ಲದೆ ಅವರಲ್ಲಿದ್ದ  35 ಗ್ರಾಂ ತೂಕದ, 1,75,000 ರೂ. ಮೌಲ್ಯದ ಎಂಡಿಎಂಎ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. 


ಜೊತೆಗೆ ಎರಡು ಮೊಬೈಲ್ ಫೋನ್ ಗಳು, 600 ರೂ. ನಗದು, ಡಿಜಿಟಲ್ ತೂಕ ಮಾಪನ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,96,000 ರೂ. ಆಗಬಹುದೆಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.          

ಆರೋಪಿಗಳ ಪೈಕಿ ಅಬ್ದುಲ್ ಅಜೀಜ್ ಈ ಹಿಂದೆ ಉಪ್ಪಿನಂಗಡಿ, ವಿಟ್ಲ ಹಾಗೂ ಉರ್ವಾ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಜೈಲುಪಾಲಾಗಿದ್ದ. 15 ದಿನಗಳ ಹಿಂದೆಯಷ್ಟೇ ಆತ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಇದೀಗ ಮತ್ತೆ ಅದೇ ಮಾದಕ ವಸ್ತು ಮಾರಾಟ ದಂಧೆ ನಡೆಸುತ್ತಿದ್ದಾನೆ.

        

Ads on article

Advertise in articles 1

advertising articles 2

Advertise under the article