-->
ಹಾಲಶ್ರೀ ಎದುರು ತನಿಖೆ ಮಾಡಿದಾಗ ತತ್ತರಿಸಿದ ಚೈತ್ರಾ ಹಣ ವಂಚನೆ ಮಾಡಿದ್ದಾಗಿ ಸಿಸಿಬಿ ಎದುರು ತಪ್ಪೊಪ್ಪಿಗೆ

ಹಾಲಶ್ರೀ ಎದುರು ತನಿಖೆ ಮಾಡಿದಾಗ ತತ್ತರಿಸಿದ ಚೈತ್ರಾ ಹಣ ವಂಚನೆ ಮಾಡಿದ್ದಾಗಿ ಸಿಸಿಬಿ ಎದುರು ತಪ್ಪೊಪ್ಪಿಗೆ


ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುತ್ತೇವೆ ಎಂದು ಉದ್ಯಮಿಯಿಂದ ಕೋಟ್ಯಂತರ ರೂಪಾಯಿ ಹಣ ವಂಚಿಸಿರುವ ಪ್ರಕರಣದಲ್ಲಿ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಸಿಸಿಬಿ ಮುಂದೆ ತಪೊಪ್ಪಿಗೆ ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ. ಚೈತ್ರಾ ತಪ್ಪೊಪ್ಪಿಗೆಯಿಂದ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್ ದೊರಕಿದೆ.

ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದಿನದಿಂದಲೂ ಚೈತ್ರಾ ಡ್ರಾಮಾ ಮಾಡುತ್ತಿದ್ದರು. ಊಟ ಬಿಟ್ಟು, ಅನಾರೋಗ್ಯ ಎಂದು ಆಸ್ಪತ್ರೆಯನ್ನೂ ಸೇರಿದ್ದರು. ಬಳಿಕ ಹಾಲಶ್ರೀ ಸ್ವಾಮೀಜಿ ಸಿಗಲಿ ದೊಡ್ಡ ದೊಡ್ಡವರ ಹೆಸರು ಹೊರಬರುತ್ತೆಂದು ಹೇಳಿ ಅಚ್ಚರಿ ಸೃಷ್ಟಿಸಿದ್ದರು. ಉದ್ಯಮಿ ಗೋವಿಂದ ಬಾಬು ಪೂಜಾರಿ ಇಂದಿರಾ ಕ್ಯಾಂಟೀನ್ ಹಗರಣಕ್ಕಾಗಿ ತನ್ನನ್ನು ಫಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಅಲ್ಲದೆ, ಹಾಲಶ್ರೀ ಸ್ವಾಮೀಜಿ ಕಡೆ ಬೊಟ್ಟು ಮಾಡುತ್ತಿದ್ದ ಚೈತ್ರಾ, ಸಿಸಿಬಿ ಮುಂದೆಯೂ ಇದನ್ನೇ ಹೇಳಿದ್ದರು. ಯಾಕಂದರೆ, ಹಾಲಶ್ರೀ ಎಸ್ಕೆಪ್ ಆಗಿದ್ದಾರೆ. ಅವರು ಪೊಲೀಸ್ ಕೈಗೆ ಸಿಕ್ಕೋಲ್ಲ ಎಂದು ಚೈತ್ರಾ ಅಂದುಕೊಂಡಿದ್ದಳು. ಆದರೆ, ಯಾವಾಗ ಹಾಲಶ್ರೀಯನ್ನು ಒಡಿಶಾ ಕಟಕ್‌ನಲ್ಲಿ ಬಂಧಿಸಲಾಯಿತೋ ಇತ್ತ ಚೈತ್ರಾ ತತ್ತರಿಸಿ ಹೋಗಿದ್ದಾಳೆ. ಇದೀಗ ಹಾಲಶ್ರೀ ಮುಂದೆ ಚೈತ್ರಾಳನ್ನು ಕೂರಿಸಿಯೇ ಪೊಲೀಸರು ವಿಚಾರಣೆ ಮಾಡಿ ನಿಜ ಬಾಯಿ ಬಿಡುವಂತೆ ಮಾಡಿಸಿದ್ದಾರೆ. ಶ್ರೀಕಾಂತ್ ಪೂಜಾರಿಯೊಂದಿಗೆ ಸೇರಿ ವಂಚನೆಗೆ ಪ್ಲ್ಯಾನ್ ಮಾಡಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ.

ಚೈತ್ರಾ ಕುಂದಾಪುರ ಹಾಗೂ ಹಾಲಶ್ರೀ ಅವರನ್ನು ಮುಖಾಮುಖಿ ಕೂರಿಸಿ ಸಿಸಿಬಿ ತಂಡ ವಿಚಾರಣೆ ನಡೆಸಿದೆ. ಸಾಕ್ಷಿಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ ಚೈತ್ರಾ ತಪ್ಪೊಪ್ಪಿಕೊಂಡಿದ್ದಾಳೆ. ವ್ಯವಹಾರ ನಡೆಸಿದ್ದಕ್ಕೆ ವಿಡಿಯೋ, ಆಡಿಯೋ ಮೊಬೈಲ್ ಕರೆಗಳು, ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಚಿನ್ನ, ಹಣ, ಬ್ಯಾಂಕ್ ಠೇವಣಿ, ಜಪ್ತಿ ಮಾಡಿದ್ದ ಕಾರು, ದಾಖಲೆಗಳನ್ನ ಮುಂದಿಟ್ಟು ಸಿಸಿಬಿ ತಂಡ ಪ್ರಶ್ನೆ ಮಾಡಿದ್ದಾರೆ. ಆದ್ದರಿಂದ ನಿರಾಕರಿಸುವುದಕ್ಕೆ ಆಗದೇ ಸಿಕ್ಕಿಬಿದ್ದಿದ್ದಾರೆ. ಸಿಸಿಬಿ ದಾಖಲೆ ಕಂಡು ಎಲ್ಲವನ್ನೂ ಬಾಯ್ಬಿಟ್ಟ ಚೈತ್ರಾ, ತಾನು ಹಣ ಮಾಡುವ ಉದ್ದೇಶದಿಂದ ಕೃತ್ಯ ಎಸಗಿದ್ದಾಗಿ ತಪೊಪ್ಪಿಕೊಂಡಿದ್ದಾಳೆ. ಪರಿಚಿತರ ಮೂಲಕ ಗೋವಿಂದ ಬಾಬು ಅವರನ್ನು ಮುನ್ನಲೆಗೆ ತರುವುದು, ಟಿಕೆಟ್ ವಿಚಾರವಾಗಿ ನಂಬಿಕೆ ಬರುವಂತಹ ಸನ್ನಿವೇಶ ಸೃಷ್ಟಿಸುವುದು, ಒಂದು ವೇಳೆ ಟಿಕೆಟ್ ಸಿಕ್ಕರೆ ತಾನು ಸೇಫ್ ಎಂದು ಚೈತ್ರಾ ಪ್ಲ್ಯಾನ್ ಮಾಡಿದ್ದರು. 

ಟಿಕೆಟ್ ಸಿಗದೇ ಹೋದಲ್ಲಿ, ನಾವು ಹಣ ಇಟ್ಟುಕೊಂಡಿಲ್ಲ. ವಿಶ್ವನಾಥ್ ಜೀಗೆ ಕೊಟ್ಟಿದ್ದಾಗಿ ಹೇಳಿಕೆ ನೀಡಲು ತಂಡ ನಾಟಕ ಹೆಣೆದಿತ್ತು. ನಾವು ನೆಪ ಮಾತ್ರಕ್ಕೆ ಸಹಾಯ ಮಾಡಿದ್ದೇವೆ, ಹಣ ತೆಗೆದುಕೊಂಡು ಹೋಗಿ ನೀಡಿದ್ದೇವೆ ಅಷ್ಟೇ ಎಂದು ನಂಬಿಸುವುದು ಮತ್ತು ವಿಶ್ವನಾಥ್ ಜೀ ಮೃತಪಟ್ಟಿದ್ದಾರೆ. ನಮಗೇ ಗೊತ್ತೇ ಇಲ್ಲ ಎಂದು ಹೇಳಲು ತಂಡ ಸಂಚು ರೂಪಿಸಿತ್ತು. 5 ಕೋಟಿ ರೂಪಾಯಿಯಲ್ಲಿ ಸುಮಾರು ಮೂರುವರೆ ಕೋಟಿ ಚೈತ್ರಾ ಕೈಸೇರಿತ್ತು. ಒಂದೂವರೆ ಕೋಟಿ ರೂಪಾಯಿ ಹಾಲಶ್ರೀ ಪಡೆದುಕೊಂಡಿದ್ದರು. ಈ ಎಲ್ಲಾ ವಿಚಾರಗಳನ್ನು ಚೈತ್ರಾ ಸಿಸಿಬಿಗೆ ತಿಳಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article