ಮಂಗಳೂರು: ಟಾರ್ಗೆಟ್ ಇಲಿಯಾಸ್ ಕೊಲೆ ಪ್ರಕರಣ- ಐದು ಮಂದಿ ದೋಷಮುಕ್ತ
Tuesday, December 12, 2023
ಮಂಗಳೂರು: 'ಟಾರ್ಗೆಟ್ ಗ್ಯಾಂಗ್'ನ ಮುಖ್ಯಸ್ಥ ಟಾರ್ಗೆಟ್ ಇಲಿಯಾಸ್ನ ಹತ್ಯೆ ಮಾಡಿರುವ ಪ್ರಕರಣದಲ್ಲಿ ಐವರನ್ನು ದೋಷಮುಕ್ತಗೊಳಿಸಿ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಉಳ್ಳಾಲ ಧರ್ಮನಗರದ ದಾವೂದ್, ಮಹಮ್ಮದ್ ಶಮೀರ್ ಆಲಿಯಾಸ್ ಕಡಪರ ಶಮೀರ್, ರಿಯಾಜ್, ನಮೀರ್ ಹಂಝ, ಅಬ್ದುಲ್ ಖಾದರ್ ಆಲಿಯಾಸ್ ಜಬ್ಬಾರ್ ದೋಷಮುಕ್ತಗೊಂಡವರು.
ಟಾರ್ಗೆಟ್ ಇಲಿಯಾಸ್ನನ್ನು 2018ರ ಜ.13ರಂದು ನಗರದ ಜಪ್ಪು ಕುಡುಪಾಡಿ ಬಳಿ ಇರುವ ಅಪಾರ್ಟ್ಮೆಂಟ್ನಲ್ಲಿ ಇರಿದು ಕೊಲೆಗೈಯಲಾಗಿತ್ತು. ಉಳ್ಳಾಲ ದಾವೂದ್, ಮಹಮ್ಮದ್ ಶಮೀರ್, ಉಮ್ಮರ್ ನವಾಫ್, ನೌಶದ್, ಮೊಹಮ್ಮದ್ ನಾಸಿರ್, ರಿಯಾಜ್, ನಮೀರ್ ಹಂಝ, ಅಸ್ಲರ್ ಆಲಿ ಆಲಿಯಾಸ್ ಅಶ್ರಫ್, ಅಬ್ದುಲ್ ಖಾದರ್ ಆಲಿಯಾಸ್ ಜಬ್ಬಾರ್ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶೆ
ಸಂಧ್ಯಾ ಎಸ್. ಅವರು ಆರೋಪಿಗಳು ನಿರ್ದೋಷಿಗಳೆಂದು ತೀರ್ಪು ನೀಡಿದ್ದಾರೆ.
ಐವರು ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಬಿ.ಜಿನೇಂದ್ರ ಕುಮಾರ್, ಅರವಿಂದ ಕುಮಾರ್ ಕೆ., ಬಿ.ಅಭಿಜಿತ್ ಜೈನ್, ವಸುಧಾ ಬಿ. ಮತ್ತು. ಅನುಶ್ರೀ ಹೆಗ್ಡೆ ಎಂ. ವಾದಿಸಿದ್ದರು. ಈ ಪ್ರಕರಣದಲ್ಲಿ ಉಮ್ಮರ್ ನವಾಫ್, ನೌಶದ್, ಮೊಹಮ್ಮದ್ ನಾಸಿರ್, ಅಸ್ಟರ್ ಆಲಿ ಆಲಿಯಾಸ್ ಅಶ್ರಫ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿ ಕೊಂಡಿದ್ದಾರೆ.