ಪ್ರಜ್ವಲ್ ರೇವಣ್ಣ ಇಂದು ಎಸ್ಐಟಿಗೆ ಶರಣಾಗುವ ಸಾಧ್ಯತೆ?: ಬೆಂಗಳೂರು ಏರ್ಪೋರ್ಟ್ ನಲ್ಲಿ ಬಂಧಿಸಲು ಸಜ್ಜಾಗಿರುವ ಎಸ್ಐಟಿ ಅಧಿಕಾರಿಗಳ ತಂಡ
Sunday, May 5, 2024
ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ರವಿವಾರವೇ ಎಸ್ಐಟಿ ಮುಂದೆ ಶರಣಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ದುಬೈನಿಂದ ಆಗಮಿಸುವ ಪ್ರಜ್ವಲ್ ರೇವಣ್ಣರ ಬಂಧನಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್ಐಟಿ ಅಧಿಕಾರಿಗಳ ತಂಡ ಬೀಡುಬಿಟ್ಟಿದೆ.
ಅಶ್ಲೀಲ ವೀಡಿಯೋ ಪೆನ್ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಜರ್ಮನಿ ಪ್ರವಾಸಕ್ಕೆ ತೆರಳಿದ್ದರು. ಇದೀಗ ಅವರಿಗೆ ಎಸ್ಐಟಿ ಸಂಕಷ್ಟ ಎದುರಾಗಿದೆ. ಸಂತ್ರಸ್ತೆಯೊಬ್ಬರು ನೀಡಿರುವ ದೂರಿನನ್ವಯ ಪ್ರಜ್ವಲ್ ಬಂಧನಕ್ಕೆ ಎಸ್ಐಟಿ ತೀವ್ರ ಶೋಧ ನಡೆಸುತ್ತಿದೆ. ಇತ್ತ ಅವರ ತಂದೆ ಎಚ್.ಡಿ.ರೇವಣ್ಣ ಬಂಧನಕ್ಕೊಳಗಾಗಿದ್ದಾರೆ. ಅದರಿಂದ ಇನ್ನಷ್ಟು ಒತ್ತಡ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಜ್ವಲ್ ವಿದೇಶದಿಂದ ಬೆಂಗಳೂರಿಗೆ ಮರಳುತ್ತಿದ್ದು ಎಸ್ಐಟಿ ಮುಂದೆ ಶರಣಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಪೆನ್ಡ್ರೈವ್ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ಬಂಧಿಸುವುದು ಖಚಿತವಾಗಿದೆ. ಅವರು ದೇಶಕ್ಕೆ ಕಾಲಿಡುತ್ತಿದ್ದಂತೆ ಏರ್ಪೋರ್ಟ್ ಸಿಬ್ಬಂದಿಯೇ ವಶಕ್ಕೆ ಪಡೆದು ಎಸ್ಐಟಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ. ಎಲ್ಲಾ ಬೆಳವಣಿಗೆಗಳ ಬಳಿಕ ವಕೀಲರ ಸಲಹೆ ಪಡೆದು ಪೊಲೀಸರಿಗೆ ಶರಣಾಗುವ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎಂದು ತಿಳಿದು ಬಂದಿದೆ.