-->
ಪ್ರವಾಹ ಉಕ್ಕೇರಿದ್ದ ಸೇತುವೆಯ ಮೇಲೆ ಬುಲ್ಡೇಜರ್ ನುಗ್ಗಿಸಿ 9ಬಡಜೀವಗಳನ್ನು ರಕ್ಷಿಸಿದ ಸುಭಾನ್ ಖಾನ್

ಪ್ರವಾಹ ಉಕ್ಕೇರಿದ್ದ ಸೇತುವೆಯ ಮೇಲೆ ಬುಲ್ಡೇಜರ್ ನುಗ್ಗಿಸಿ 9ಬಡಜೀವಗಳನ್ನು ರಕ್ಷಿಸಿದ ಸುಭಾನ್ ಖಾನ್



ಹೈದರಾಬಾದ್ : ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಪ್ರವಾಹ ಉಕ್ಕೇರಿದ್ದ ಸೇತುವೆಯಲ್ಲಿ ಸಿಕ್ಕಿಕೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದ 9ಜನರನ್ನು ಬುಲ್ಡೇಝರ್ ಅನ್ನೇ ಕೊಂಡೊಯ್ದು ಎಲ್ಲರನ್ನು ಸುರಕ್ಷಿತವಾಗಿ ಕರೆತಂದ ಹರ್ಯಾಣದ ಸುಭಾನ್ ಖಾನ್ ಹೀರೋ ಆಗಿದ್ದಾರೆ.

ಭಾರೀ ಮಳೆಯಿಂದಾಗಿ ಮುನ್ನೇರು ನದಿಯ ನೀರಿನ ಮಟ್ಟ ಏಕಾಏಕಿ ಹೆಚ್ಚಿತ್ತು. ಪರಿಣಾಮ ಪ್ರಕಾಶ ನಗರ ಸೇತುವೆಯ ಮೇಲೆ ಒಂಭತ್ತು ಜನರು ಸಿಕ್ಕಿಕೊಂಡಿದ್ದರು. ಪರಿಸ್ಥಿತಿಯನ್ನು ವೀಡಿಯೊ ಚಿತ್ರೀಕರಿಸಿದ್ದ ಅವರು ತಮ್ಮ ರಕ್ಷಣೆಗಾಗಿ ರಾಜ್ಯ ಸರಕಾರವನ್ನು ಕೋರಿದ್ದರು. ಸರಕಾರವು ಹೆಲಿಕಾಪ್ಟರನ್ನು ರವಾನಿಸಿತ್ತು ಆರೂ ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಸ್ಥಳವನ್ನು ತಲುಪಲು ಸಾಧ್ಯವಾಗಿರಲಿಲ್ಲ.

ಯಾವುದೇ ನೆರವು ಸಾಧ್ಯತೆಯಿಲ್ಲದಾಗ ತನ್ನ ಬುಲ್ಡೇಝರ್ ಮೂಲಕ ಅವರನ್ನು ರಕ್ಷಿಸಲು ಖಾನ್ ನಿರ್ಧರಿಸಿದ್ದರು. ಅಪಾಯದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ್ದ ಇತರರು ದುಸ್ಸಾಹಸಕ್ಕೆ ಮುಂದಾಗದಂತೆ ಸೂಚಿಸಿದ್ದರು. ಬುಲ್ಡೇಝರ್ ಹತ್ತಿ ಸೇತುವೆಯತ್ತ ತೆರಳುವ ಮುನ್ನ ಖಾನ್ 'ನಾನು ಸತ್ತರೆ ಅದು ಒಂದೇ ಜೀವ, ಆದರೆ ನಾನು ವಾಪಸ್ಸಾದರೆ ಒಂಭತ್ತು ಜೀವಗಳನ್ನು ರಕ್ಷಿಸಿರುತ್ತೇನೆ 'ಎಂಬ ಒಂದೇ ಮಾತನ್ನು ಹೇಳಿದ್ದರು.

ಒಂಬತ್ತು ಜನರನ್ನೂ ರಕ್ಷಿಸಿ ಬುಲ್ಡೇಝರ್ ಮರಳಿದಾಗ ಅಲ್ಲಿದ್ದವರು ಹರ್ಷೋದ್ಗಾರಗಳಿಂದ ಸ್ವಾಗತಿಸಿದ್ದಾರೆ. ಖಾನ್ ಅವರ ಕೆಚ್ಚೆದೆಯ ಕಾರ್ಯಾಚರಣೆಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಅವರನ್ನು ನಿಜಜೀವನದ ಹೀರೋ ಎಂದಿರುವ ಜನರು ಇತರರನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕೊಡ್ಡಿದ್ದ ಅವರ ಧೈರ್ಯವನ್ನು ಕೊಂಡಾಡುತ್ತಿದ್ದಾರೆ.

ಹಿರಿಯ ಬಿಆರ್‌ಎಸ್‌ ನಾಯಕ ಹಾಗೂ ಮಾಜಿ ಸಚಿವ ಕೆ.ಟಿ.ರಾಮರಾವ್‌ ಸೇರಿದಂತೆ ಹಲವಾರು ಜನರು ಖಾನ್‌ಗೆ ಕರೆಗಳನ್ನು ಮಾಡಿ ಅಭಿನಂದಿಸಿದ್ದಾರೆ.

Ads on article

Advertise in articles 1

advertising articles 2

Advertise under the article