ಕಾರು-ಲಾರಿ ನಡುವೆ ಭೀಕರ ರಸ್ತೆ ಅಪಘಾತ: ಓವರ್ಟೇಕ್ ಭರದಲ್ಲಿ ಏಳು ತಿಂಗಳ ಮಗು ಸೇರಿದಂತೆ ಹೆತ್ತವರು ಸಾವು
Thursday, February 20, 2025
ಕಾರವಾರ: ಲಾರಿಗೆ ಮುಖಾಮುಖಿಯಾಗಿ ಕಾರೊಂದು ಗುದ್ದಿದ ಪರಿಣಾಮ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಏಳು ತಿಂಗಳ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.
ಮೃತರನ್ನು ಕೊಪ್ಪಳದ ಆರ್. ವೆಂಕಟೇಶ್, ಪತ್ನಿ ಚೈತ್ರಾ ಹಾಗೂ ಅವರ 7 ತಿಂಗಳ ಹಸುಗೂಸು ಶ್ರೀಹಾನ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ದಾಖಲಿಸಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಕೊಪ್ಪಳದಿಂದ ಅಂಕೋಲಾಕ್ಕೆ ಪ್ರವಾಸಕ್ಕೆಂದು ತೆರಳುತ್ತಿದ್ದರು. ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದ ಬಳಿ ಓವರಟೇಕ್ ಮಾಡುವ ಭರದಲ್ಲಿ ಮುಂಭಾಗದಲ್ಲಿ ಬರುತ್ತಿದ್ದ ಲಾರಿಗೆ ಕಾರು ಗುದ್ದಿದ ಪರಿಣಾಮ ಈ ದುರಂತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶ್ರೀಕಾಂತ್ ರೆಡ್ಡಿ ಎಂಬವರ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.