ಜನಮನ ಸೆಳೆಯುತ್ತಿರುವ ತಣ್ಣೀರುಬಾವಿ ಬೀಚ್ ಫೆಸ್ಟಿವಲ್
Saturday, February 1, 2025
ಮಂಗಳೂರು: ಜ.31ರಿಂದ ತಣ್ಣೀರುಬಾವಿ ಕಡಲ ತೀರದಲ್ಲಿ ನಡೆಯುತ್ತಿರುವ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಮತ್ತು ತಪಸ್ಯಾ ಫೌಂಡೇಶನ್ ಆಯೋಜನೆಯ ಮೂರು ದಿನಗಳ ಬೀಚ್ ಫೆಸ್ಟಿವಲ್-ಟ್ರಯಾಥ್ಲನ್ ಸಾವಿರಾರು ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕರಾವಳಿ ಜನರ ಕೃಷಿ ಮತ್ತು ಜನಪದ ಬದುಕನ್ನು ಬಿಂಬಿಸುವ ಕೃಷಿ ಮೇಳ, ಸ್ತಬ್ಧಚಿತ್ರಗಳು ಪ್ರಮುಖ ಆಕರ್ಷಣೆಯಾಗಿದ್ದು ಕ್ರೀಡೆ, ಗಾನ ಸುಧೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣದಲ್ಲಿ ಪ್ರವಾಸಿಗರು ಮಿಂದೇಳುತ್ತಿದ್ದಾರೆ. ಎರಡನೇ ದಿನವಾದ ಶನಿವಾರ ಬೀಚ್ ನಲ್ಲಿ ಭಾರೀ ಸಂಖ್ಯೆಯ ಪ್ರವಾಸಿಗರು ಸೇರಿದ್ದು ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು.
ಕೃಷಿಮೇಳಗಳಲ್ಲಿ ವಿವಿಧ ಕೃಷಿ ಉತ್ಪನ್ನಗಳು ಮತ್ತು ಬೀಜಗಳು, ಗಿಡಗಳು, ಕೃಷಿ ಚಟುವಟಿಕೆಯಲ್ಲಿ ಬಳಸುವ ಸಲಕರಣೆಗಳ ಸ್ಟಾಲ್ ಗಳಲ್ಲಿ ಜನರು ಆಸಕ್ತಿಯಿಂದ ಭೇಟಿ ಕೊಟ್ಟು ಖರೀದಿಸುತ್ತಿದ್ದರು. ಅಲ್ಲೇ ಮುಂಭಾಗದಲ್ಲಿ ಕರಾವಳಿ ಕೃಷಿ ಬದುಕನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಜನಾಕರ್ಷಣೆಯನ್ನು ಪಡೆದಿತ್ತು.
ನೇಜಿ ನೆಡುವ ಮಹಿಳೆಯರು, ಭತ್ತವನ್ನು ಬೇರ್ಪಡಿಸುವ ಗಂಡಸರು, ಗದ್ದೆ ಉಳುವ ಕೋಣಗಳು ಇವೆಲ್ಲದರ ಜೊತೆ ನಿಂತು ಯುವಜನತೆ ಸೆಲ್ಫಿ ಪಡೆಯುತ್ತಿದ್ದರು.
ಬೀಚ್ ನಲ್ಲಿ ಕೇರಳದ ಸಂಪ್ರದಾಯಿಕ ಕಳರಿಪಯಟ್ ಪ್ರದರ್ಶನ, ಮಲ್ಲಕಂಭ ಪ್ರದರ್ಶನ, ಸ್ವರಧಿ ತಂಡದಿಂದ ಸಂಗೀತ ಕಾರ್ಯಕ್ರಮ ಭಾರೀ ಆಕರ್ಷಣೆ ಪಡೆದಿತ್ತು.
ಫೆ.2ರ ಸಂಜೆ ನಿಹಾಲ್ ತಾವ್ರೋ ಸಂಗೀತ ಸಂಜೆ!
ಬೀಚ್ ಫೆಸ್ಟಿವಲ್ ಪ್ರಮುಖ ಆಕರ್ಷಣೆಯಾಗಿರುವ ಖ್ಯಾತ ಗಾಯಕ ನಿಹಾಲ್ ತಾವ್ರೋ ಸಂಗೀತ ಕಾರ್ಯಕ್ರಮ ಫೆ.2ರ ರಾತ್ರಿ 8 ಗಂಟೆಗೆ ನಡೆಯಲಿದೆ. ರಾತ್ರಿ 7 ಗಂಟೆಗೆ ಫ್ಯಾಷನ್ ಶೋ ಏರ್ಪಡಿಸಲಾಗಿದೆ.
“ಜನರ ಅಭೂತಪೂರ್ವ ಬೆಂಬಲ“
”ಮೂರನೇ ಆವೃತ್ತಿಯ ಬೀಚ್ ಫೆಸ್ಟಿವಲ್ ಗೆ ಜನರು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳ
ಆರೈಕೆಗೆಂದು ತಪಸ್ಯಾ ಫೌಂಡೇಶನ್ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಜೊತೆ ಸಹಯೋಗದೊಂದಿಗೆ ಬೀಚ್ ಫೆಸ್ಟಿವಲ್ ಆಯೋಜನೆ ಮಾಡಿದ್ದೇವೆ. ಪ್ರವಾಸಿಗರು, ಮಂಗಳೂರಿಗರು ನಮ್ಮ ಆಯೋಜನೆ ಕಂಡು ಖುಷಿ ಪಟ್ಟಿದ್ದಾರೆ. ಇದು ಮಂಗಳೂರಿನ ಸಂಭ್ರಮದ ಕ್ಷಣಗಳಾಗಿದ್ದು ಫೆ. 2ರಂದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ನಿರೀಕ್ಷೆ ಮಾಡುತ್ತಿದ್ದೇವೆ“
-ಸಬಿತಾ ಆರ್. ಶೆಟ್ಟಿ
ಸಂಸ್ಥಾಪಕಿ, ತಪಸ್ಯಾ ಫೌಂಡೇಶನ್
”ಬೀಚ್ ಫೆಸ್ಟಿವಲ್, ಕೃಷಿ ಮೇಳ ಜನರನ್ನು ಅಕರ್ಷಿಸುವಲ್ಲಿ ಯಶಸ್ಸು ಕಂಡಿದೆ. ಒಂದು ಮಹೋನ್ನತ ಧ್ಯೇಯವನ್ನಿಟ್ಟುಕೊಂಡು ಸಂಘಟನೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಮೊದಲ ಎರಡು ಆವೃತ್ತಿಯಲ್ಲಿ ಸಿಕ್ಕಿದ ಬೆಂಬಲಕ್ಕಿಂತ ಈ ಬಾರಿ ಹೆಚ್ಚಿನ ಸಹಕಾರ ಜಿಲ್ಲಾಡಳಿತ ಸಹಿತ ವಿವಿಧ ಇಲಾಖೆಗಳಿಂದ ಸಿಕ್ಕಿದೆ. ಜನರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮ್ಮ ಆಶಯವನ್ನು ಸಾಕಾರಗೊಳಿಸಬೇಕು“
-ನವೀನ್ ಹೆಗ್ಡೆ
ಟ್ರಷ್ಟಿ ತಪಸ್ಯಾ ಫೌಂಡೇಶನ್