ಕಿಚ್ಚ ಸುದೀಪ್ ಗೌಪ್ಯವಾಗಿ ಡಿಕೆಶಿ ಭೇಟಿ- ಅಭಿನಯ ಚಕ್ರವರ್ತಿಯ ರಾಜಕೀಯ ಎಂಟ್ರಿ ಬಗ್ಗೆ ಡಿಸಿಎಂ ಸ್ಪಷ್ಟನೆ
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಡಿಸಿಎಂ ಡಿ.ಕೆ.ಶಿವಕುಮಾರ್ರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯ ಸೇರ್ಪಡೆಯಾಗುತ್ತಾರೆ ಎಂಬ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗಿದೆ. ಈ ಬಗ್ಗೆ ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರದ ಮನೆಗೆ ತೆರಳಿ ನಟ ಕಿಚ್ಚ ಸುದೀಪ್ ಅವರು ಕೆಲಹೊತ್ತು ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಸುದೀಪ್ ಅವರಿಗೆ ನಟ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಸಾಥ್ ನೀಡಿದ್ದಾರೆ. ಗುರುವಾರ ಬೆಳಗ್ಗೆಯೇ ಡಿ.ಕೆ.ಶಿ.ಯವರ ಮನೆಗೆ ತೆರಳಿದ ಸುದೀಪ್ ಹಾಗೂ ಅನೂಪ್ ಭಂಡಾರಿ ಕೆಲ ಹೊತ್ತು ಚರ್ಚೆ ಮಾಡಿ ಹೊರಗೆ ಬಂದಿದ್ದಾರೆ. ಇಲ್ಲಿ ಚರ್ಚೆ ನಡೆದಿದ್ದು ರಾಜಕೀಯ ವಿಚಾರವೇ ಅಥವಾ ಬೇರೆ ಯಾವ ಕುರಿತಾದ ಚರ್ಚೆ ಎಂಬುದು ಭಾರೀ ಕುತೂಹಲ ಕೆರಳಿಸಿತ್ತು. ಇದರ ಬೆನ್ನಲ್ಲಿಯೇ ಡಿ.ಕೆ. ಶಿವಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ.
ನಟ ಸುದೀಪ್ ಭೇಟಿಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಸುದೀಪ್ ಅವರದ್ದೇನೋ ಪರ್ಸನಲ್ ಇಶ್ಯೂ ಇತ್ತು. ಅವರದು ಶೂಟಿಂಗ್ ಮಾಡುವ ಜಾಗದ ಕುರಿತಾಗಿ ಏನೋ ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದಿತ್ತು. ಆಸ್ ಎ ಫ್ರೆಂಡ್ (As a Friend) ಆಗಿ ಅವರು ನಮ್ಮ ಮನೆಗೆ ಬಂದಿದ್ದರು. ಸಿನಿಮಾ ಶೂಟಿಂಗ್ ಜಾಗದ ವಿಚಾರವಾಗಿ ಅವರೊಂದಿಗೆ ನಾನು ಮಾತನಾಡಿದ್ದೇನೆ. ಅದನ್ನು ಬಿಟ್ಟು ಬೇರೆನೂ ಚರ್ಚಿಸಿಲ್ಲ. ಅವರ ಭೇಟಿಯಲ್ಲಿ ರಾಜಕೀಯನೂ ಇಲ್ಲಾ..., ಏನೂ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದರು.
ಕಿಚ್ಚ ಸುದೀಪ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯಕ್ಕೆ ಆಹ್ವಾನ ನೀಡಲು ಆಗಮಿಸಿದ್ದರು ಎಂದೂ ಹೇಳಲಾಗುತ್ತಿದೆ. ಫೆ.8 ಮತ್ತು ಫೆ.9ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಎಲ್ ಪಂದ್ಯಗಳು ನಡೆಯಲಿದೆ. ಫೆಬ್ರವರಿ 8 ರಂದು ಹೈದರಾಬಾದ್ ವಿರುದ್ದ ಮೊದಲ ಪಂದ್ಯ ಆಡಲಿರುವ ಕರ್ನಾಟಕ ಬುಲ್ಡೋಜರ್ ಪಂದ್ಯ ನಡೆಯಲ್ಲಿದ್ದು, ಈ ಪಂದ್ಯ ವೀಕ್ಷಣೆಗೆ ಬರುವಂತೆ ಆಹ್ವಾನಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.