ಉನ್ನತ ವ್ಯಾಸಂಗಕ್ಕೆ ನೀಡಿದ್ದ 35ಲಕ್ಷ ಹಣ ದುರ್ಬಳಕೆ: ತನ್ನ ಮನೆಗೇ ಬೆಂಕಿ ಹಚ್ಚಿ ಹೈಡ್ರಾಮಾ ಸೃಷ್ಟಿಸಿದ್ದ ಪುತ್ರನೀಗ ಪೊಲೀಸ್ ಅತಿಥಿ
Friday, March 21, 2025
ಬೆಂಗಳೂರು: ಉನ್ನತ ವ್ಯಾಸಂಗಕ್ಕೆಂದು ತಂದೆ ನೀಡಿದ್ದ 1.1 ಕೋಟಿಯಲ್ಲಿ 35 ಲಕ್ಷ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದ ಪುತ್ರನೋರ್ವನು, ಮನೆಯವರ ಗಮನವನ್ನು ಬೇರೆಡೆಗೆ ಸೆಳೆಯಲು ತನ್ನ ಮನೆಗೇ ಬೆಂಕಿ ಹಚ್ಚಿ, ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.
ಹಿರಂಡಹಳ್ಳಿ ಗ್ರಾಮದ ನಿವಾಸಿ ರಂಜಿತ್ ವಿವೇಕ್(22) ಬಂಧಿತ ಆರೋಪಿ.
ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಗ್ರಾಪಂ ಸದಸ್ಯ ಜಗನ್ನಾಥ್ ಎಂಬುವವರ ಹಿರಂಡಹಳ್ಳಿ ಗ್ರಾಮದ ನಿವಾಸದಲ್ಲಿ ಇತ್ತೀಚೆಗೆ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಮೊದಲಿಗೆ ದುಷ್ಕರ್ಮಿಗಳು ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಬಳಿಕ, ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಿದ, ಪೊಲೀಸರಿಗೆ ಜಗನ್ನಾಥ್ ಅವರ ಪುತ್ರ ರಂಜಿತ್ ವಿವೇಕ್ ಚಲನವಲನಗಳ ಮೇಲೆ ಅನುಮಾನ ವ್ಯಕ್ತವಾಗಿತ್ತು.
ಬಳಿಕ, ರಂಜಿತ್ ವಿವೇಕ್ನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಆತ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ತಂದೆ ನೀಡಿದ್ದ 1.1ಕೋಟಿ ರೂ. ಹಣವನ್ನು ತಾನು ಜೂಜಾಟ ಹಾಗೂ ಯುವತಿಯೊಬ್ಬಳಿಗಾಗಿ ಖರ್ಚು ಮಾಡಿದ್ದೇನೆ ಎಂದು ಆತ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ.
ಆ ಬಳಿಕ ತಂದೆ ನನ್ನಿಂದ ಹಣ ವಾಪಸ್ ಕೇಳಬಹುದೆಂಬ ಭೀತಿಯಿಂದ ಅವರ ಗಮನ ಬೇರೆಡೆ ಸೆಳೆಯಲು, ನಾನು ಮನೆಗೆ ಬೆಂಕಿ ಹಚ್ಚಲು ತೀರ್ಮಾನಿಸಿದೆ ಎಂದು ರಂಜಿತ್ ವಿವೇಕ್ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಯೋಜನೆ ಕಾರ್ಯಗತಗೊಳಿಸಲು ರಂಜಿತ್ ವಿವೇಕ್ ಮನೆಯ ಸಿಸಿಟಿವಿ ಕ್ಯಾಮೆರಾದ ಸಂಪರ್ಕವನ್ನು ಕಡಿತಗೊಳಿಸಿದ್ದನು. ಆದರೂ, ಆತನ ಕೃತ್ಯ ಮತ್ತೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರು ಕ್ಯಾನ್ಗಳಲ್ಲಿ 20 ಲೀಟರ್ ಪೆಟ್ರೋಲ್ ಖರೀದಿಸಿದ್ದ ರಂಜಿತ್ ವಿವೇಕ್, ಈ ಪೈಕಿ ನಾಲ್ಕು ಕ್ಯಾನ್ಗಳಲ್ಲಿದ್ದ ಪೆಟ್ರೋಲ್ ಅನ್ನು ಮನೆಗೆ ಬೆಂಕಿ ಹಚ್ಚಲು ಬಳಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ನಡೆದಾಗ, ರಂಜಿತ್ ವಿವೇಕ್, ಆತನ ಪೋಷಕರು ಹಾಗೂ ಸಹೋದರಿ ಮನೆಯಲ್ಲಿಯೇ ಇದ್ದರು. ಆದರೆ ಅದೃಷ್ಟವಶಾತ್, ಅವರೆಲ್ಲ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು. ತಕ್ಷಣ ಅಗ್ನಿಶಾಮಕದಳ ಸ್ಥಳಕ್ಕೆ ಬಂದದರೂ, ಬೆಂಕಿ ನಂದಿಸುವ ವೇಳೆಗಾಗಲೇ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳೆಲ್ಲ ಸಂಪೂರ್ಣ ಹಾನಿಯಾಗಿತ್ತು. ವಿವೇಕ್ ವಿರುದ್ಧ ಹತ್ಯೆ ಪ್ರಯತ್ನ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.