ಸಾಯುವಾಗ ಆಕೆಯ ಖಾತೆಯಲ್ಲಿ ಕೇವಲ 80ರೂ. ಮಾತ್ರವಿತ್ತು! ಸಂಬಳವೆಲ್ಲಾ ಆತನಿಗೆ ಕಳಿಸಿ ಉಪವಾಸ ಇರುತ್ತಿದ್ದಳು: ಕಣ್ಣೀರಿಟ್ಟ ಗುಪ್ತಚರ ಬ್ಯೂರೋ ಅಧಿಕಾರಿ ಮೇಘಾ ತಂದೆ
Sunday, March 30, 2025
ರೈಲ್ವೆ ಹಳಿಯ ಸೋಮವಾರ ಮೃತದೇಹವಾಗಿ ಪತ್ತೆಯಾದ ಕೇರಳದ ಗುಪ್ತಚರ ಬ್ಯೂರೋ(ಐಬಿ) ಅಧಿಕಾರಿ ಮೇಘಾ ಮಧುಸೂದನನ್(24), ಸಾವಿನ ಸುದ್ದಿ ಆಕೆಯ ಕುಟುಂಬಸ್ಥರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಪುತ್ರಿಯ ಸಾವಿನ ಹಿಂದೆ ಯುವಕನೊಬ್ಬನ ಕೈವಾಡವಿದೆ. ಇದನ್ನು ತನಿಖೆ ಮೂಲಕ ಬಯಲಿಗೆಳೆಯಬೇಕು ಮತ್ತು ಸಾವಿನ ಸುತ್ತಲಿನ ಸಂದರ್ಭಗಳನ್ನು ಬಹಿರಂಗಪಡಿಸಲು ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಪುತ್ರಿಯೊಂದಿಗೆ ಪ್ರೀತಿ ಹೆಸರಿನಲ್ಲಿ ಸಂಬಂಧ ಹೊಂದಿದ್ದ ಸಹೋದ್ಯೋಗಿಯೊಬ್ಬ ಆಕೆಯನ್ನು ಆರ್ಥಿಕವಾಗಿ ಶೋಷಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೇಘಾ ತಂದೆ ಮಧುಸೂಧನನ್ ಹೇಳಿಕೆ ಪ್ರಕಾರ, “ಆಕೆ ತನಗೆ ಬರುತ್ತಿದ್ದ ಮಾಸಿಕ ಸಂಬಳವನ್ನು ಆತನ ಖಾತೆಗೆ ವರ್ಗಾಯಿಸಿ, ತಾನು ಹಣವಿಲ್ಲದೆ ಪರದಾಡುತ್ತಿದ್ದಳು. ಕಳೆದ ಫೆಬ್ರವರಿಯ ಪೂರ್ತಿ ಸಂಬಳವನ್ನು ಆತನ ಖಾತೆಗೆ ವರ್ಗಾಯಿಸಿದ್ದಾಳೆ. ಅದಕ್ಕೆ ಬ್ಯಾಂಕ್ ದಾಖಲೆಯಿದೆ" ಎಂದು ಆರೋಪಿಸಿದ್ದಾರೆ.
ಸಾಯುವ ಮುನ್ನ ಆಕೆಯ ಬ್ಯಾಂಕ್ ಖಾತೆಯಲ್ಲಿ ಕೇವಲ 80 ರೂ. ಮಾತ್ರ ಉಳಿದಿತ್ತು. ಇನ್ನುಳಿದ ಸಂಬಳದ ಹಣವನ್ನೆಲ್ಲ ಆಕೆಯ ಪ್ರಿಯಕರನಿಗೆ ಕಳಿಸಿ, ತಾನು ಉಪವಾಸ ಇರುತ್ತಿದ್ದಳು. ಈ ಮಾತನ್ನು ಆಕೆಯ ಸ್ನೇಹಿತರೇ ನನಗೆ ತಿಳಿಸಿದ್ದಾರೆ. ಇದು ಅತ್ಯಂತ ದುಃಖಕರ ಸಂಗತಿ" ಎಂದು ಮೇಘಾ ತಂದೆ ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷ ರಾಜಸ್ಥಾನದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮೇಘಾ ಮತ್ತು ಆಕೆಯ ಸಹೋದ್ಯೋಗಿ ನಡುವೆ ಪ್ರೇಮಾಂಕುರವಾಗಿದೆ. ಆಕೆಯ ದುರಂತ ಅಂತ್ಯದ ಬಳಿಕ ಕುಟುಂಬಸ್ಥರು, ಮೇಘಾ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ತನ್ನ ಸಂಪೂರ್ಣ ಸಂಬಳವನ್ನು ಆತನ ಖಾತೆಗೆ ವರ್ಗಾಯಿಸಿರುವುದು ಸ್ಪಷ್ಟವಾಗಿದೆ.
ಬ್ಯಾಂಕ್ ದಾಖಲೆಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೆಟ್ಟಾ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ತನಿಖೆಯ ಭಾಗವಾಗಿ ಕುಟುಂಬವು ಆಕೆಯ ಲ್ಯಾಪ್ಟಾಪ್ ಅನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.