-->

ಮಂಗಳೂರು: ಕಾರು ಡಿಕ್ಕಿಗೊಳಿಸಿ ನೆರೆಮನೆಯವನ ಕೊಲೆಗೆ ಯತ್ನ- ಅಪಘಾತದ ತೀವ್ರತೆಗೆ ಎಸೆಯಲ್ಪಟ್ಟು ಕಂಪೌಂಡ್ ಗೋಡೆಯಲ್ಲಿ ನೇತಾಡಿದ ಪಾದಚಾರಿ ಮಹಿಳೆ

ಮಂಗಳೂರು: ಕಾರು ಡಿಕ್ಕಿಗೊಳಿಸಿ ನೆರೆಮನೆಯವನ ಕೊಲೆಗೆ ಯತ್ನ- ಅಪಘಾತದ ತೀವ್ರತೆಗೆ ಎಸೆಯಲ್ಪಟ್ಟು ಕಂಪೌಂಡ್ ಗೋಡೆಯಲ್ಲಿ ನೇತಾಡಿದ ಪಾದಚಾರಿ ಮಹಿಳೆ


ಮಂಗಳೂರು: ಹಳೆಯ ದ್ವೇಷದಿಂದ ನೆರೆಮನೆ ನಿವಾಸಿಯನ್ನು ಕೊಲ್ಲುವ ಉದ್ದೇಶದಿಂದಲೇ ವ್ಯಕ್ತಿಯೊಬ್ಬನು ಅವರ ಬೈಕ್‌ಗೆ ಕಾರು ಡಿಕ್ಕಿಪಡಿಸಿದ ಸಂದರ್ಭ, ಪಾದಚಾರಿ ಮಹಿಳೆಯೊಬ್ಬರನ್ನು ಅನಾಮತ್ತಾಗಿ ಎತ್ತೊಯ್ದು ಕಾರು ರಸ್ತೆಬದಿಯ ಕಂಪೌಡ್‌ನಲ್ಲಿ ತಲೆಕೆಳಗೆ ನೇತಾಡುವಂತೆ ಮಾಡಿದ ಭಯಾನಕ ಘಟನೆಯೊಂದು ನಗರದ ಬಿಜೈ ಕಾಪಿಕಾಡ್‌ನ ಆರನೇ ರಸ್ತೆಯಲ್ಲಿ ನಡೆದಿದೆ. ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸತೀಶ್ ಕುಮಾರ್ ಕೆ.ಎಂ. ಎಂಬ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಹಾಗೂ ಮುರಳಿ ಪ್ರಸಾದ್ ಎಂಬ ನೆರೆಮನೆ ನಿವಾಸಿಗೆ ಹಳೆಯ ದ್ವೇಷವಿತ್ತು. ಸತೀಶ್ ಕುಮಾರ್ ಕೆ.ಎಂ. ಯಾವಾಗಲೂ ಮುರಳಿ ಪ್ರಸಾದ್‌ರೊಂದಿಗೆ ಜಗಳ ತೆಗೆದು ಗಲಾಟೆ ಮಾಡುತ್ತಿದ್ದ.

ಮಾ.13ರಂದು ಬೆಳಗ್ಗೆ 8:15ರ ಸುಮಾರಿಗೆ ಬಿಜೈ ಕಾಪಿಕಾಡ್‌ನ 6ನೇ ಮುಖ್ಯ ರಸ್ತೆಯಲ್ಲಿ ಮುರಳಿ ಪ್ರಸಾದ್‌ರವರು ತನ್ನ ಬೈಕ್‌ನಲ್ಲಿ ಮನೆಯಿಂದ ಹೊರಹೋಗುತ್ತಿದ್ದರು. ಈ ವೇಳೆ ಆರೋಪಿ ಸತೀಶ್ ಕುಮಾರ್ ಕೆ.ಎಂ.  ಕಾದು ಕುಳಿತು ತನ್ನ ಕಾರಿನಲ್ಲಿ ಉದ್ದೇಶ ಪೂರ್ವಕವಾಗಿ ಮುರಳಿ ಪ್ರಸಾದ್‌ರನ್ನು ಕೊಲೆಮಾಡುವ ಉದ್ದೇಶದಿಂದ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರು ಬೈಕ್ ಅನ್ನು ತಳ್ಳುತ್ತಾ ಮುಂದಕ್ಕೆ ಚಲಿಸಿ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅನಾಮತ್ತಾಗಿ ಎತ್ತೊಯ್ದು ರಸ್ತೆಬದಿಯ ಕಂಪೌಡ್‌ನಲ್ಲಿ ನೇತಾಡುವಂತೆ ಮಾಡಿದೆ. ಪರಿಣಾಮ ಮಹಿಳೆ ಹಾಗೂ ಮುರಳಿ ಪ್ರಸಾದ್‌ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಉರ್ವ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಸತೀಶ್ ಕುಮಾರ್ ಕೆ.ಎಂ.ನನ್ನು ಬಂಧಿಸಿ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜೊತೆಗೆ ಕಾರನ್ನು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿ ಮಹಿಳೆಗೆ ಡಿಕ್ಕಿಪಡಿಸಿದ ಬಗ್ಗೆ ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article