ಆನೇಕಲ್: ಮದ್ದೂರಮ್ಮನ ರಥ ಉರುಳಿಬಿದ್ದು ಇಬ್ಬರು ಮೃತ್ಯು, ಮತ್ತೀರ್ವರು ಗಾಯ
Sunday, March 23, 2025
ಆನೇಕಲ್: ಇಲ್ಲಿನ ಪ್ರತಿಷ್ಠಿತ ಹುಸ್ಕೂರು ಮದ್ದೂರಮ್ಮ ಜಾತ್ರೆಯ ವಿಶೇಷ ಆಕರ್ಷಣೆಯ ಎರಡು ತೇರುಗಳು ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಂಭೀರ ಗಾಯಗೊಂಡು ಘಟನೆ ನಡೆದಿದೆ.
ತಮಿಳುನಾಡು ರಾಜ್ಯದ ಹೊಸೂರು ಮೂಲದ ರೋಹಿತ್(26) ಹಾಗೂ ಬೆಂಗಳೂರಿನ ಕೆಂಗೇರಿ ಮೂಲದ ಜ್ಯೋತಿ(14)ಎಂಬ ಬಾಲಕಿ ಮೃತಪಟ್ಟ ದುರ್ದೈವಿಗಳು. ಲಕ್ಕಸಂದ್ರದ ರಾಕೇಶ್ ಹಾಗೂ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದೊಡ್ಡನಾಗಮಂಗಲದ ತೇರು ಚಿಕ್ಕನಾಗಮಂಗಲದ ಬಳಿಯಲ್ಲಿ ಮರಗಳ ಮೇಲೆ ಉರುಳಿದರೆ, ದೇವಾಲಯದ ಬಳಿಯ ರಾಯಸಂದ್ರ ಕುರುಜು ಭಕ್ತರ ಮೇಲೆಯೇ ಉರುಳಿದೆ ಎನ್ನಲಾಗಿದೆ. ಕುರುಜಿನ ಕೆಳಗೆ ಭಕ್ತರು ಸಿಲುಕಿ ಆಟೊ ಚಾಲಕ ರೋಹಿತ್ ಮತ್ತು ಬಾಲಕಿ ಜ್ಯೋತಿ ಸಾವನ್ನಪ್ಪಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.