ಪ್ರೀತಿಸಿ ವಿವಾಹವಾದ ಮರ್ಚೆಂಟ್ ನೇವಿ ಅಧಿಕಾರಿಯನ್ನು ಪ್ರೇಮಿಯೊಂದಿಗೆ ಸೇರಿ ಹತ್ಯೆಮಾಡಿದ ಪತ್ನಿ
Wednesday, March 19, 2025
ಹೊಸದಿಲ್ಲಿ: ಉತ್ತರ ಪ್ರದೇಶದ ಮೀರತ್ನ ಮರ್ಚೆಂಟ್ ನೇವಿ ಅಧಿಕಾರಿಯನ್ನು ಅವರ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆಗೈದು, ಮೃತದೇಹವನ್ನು 15ತುಂಡುಗಳನ್ನಾಗಿ ಮಾಡಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ನಿಂದ ಮುಚ್ಚಿರುವ ಭಯಾನಕ ಘಟನೆ ನಡೆದಿದೆ.
ಸೌರಭ್ ರಜಪೂತ್ ಕೊಲೆಯಾದ ವ್ಯಕ್ತಿ. ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾ ಕೊಲೆಗೈದಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾ ನಡುವೆ ವಿವಾಹೇತರ ಸಂಬಂಧವಿತ್ತು. ಮುಸ್ಕಾನ್ ಗಾಂಜಾ ಸೇದುತ್ತಿದ್ದಳು. ಆಕೆಗೆ ಸಾಹಿಲ್ ಗಾಂಜಾ ಪೂರೈಸುತ್ತಿದ್ದ. ಗಾಂಜಾ ಸೇವನೆಯಿಂದ ಆಕೆ ನಶೆಯಲ್ಲಿರುತ್ತಿದ್ದಳು ಎನ್ನಲಾಗಿದೆ.
ಸೌರಭ್ ರಜಪೂತ್ ಮತ್ತು ಮುಸ್ಕಾನ್ ರಸ್ತೋಗಿ 2016ರಲ್ಲಿ ವಿವಾಹವಾದರು. ಇವರದ್ದು ಪ್ರೇಮ ವಿವಾಹ. ಪತ್ನಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಉತ್ಸುಕನಾಗಿದ್ದ ಸೌರಭ್ ತಮ್ಮ ಮರ್ಚೆಂಟ್ ನೇವಿ ಕೆಲಸವನ್ನು ತೊರೆದರು. ಈ ನಿರ್ಧಾರ ಅವರ ಕುಟುಂಬಕ್ಕೆ ಇಷ್ಟವಾಗಲಿಲ್ಲ. ಇದು ಮನೆಯಲ್ಲಿ ಘರ್ಷಣೆಗೆ ಕಾರಣವಾಗಿತ್ತು. ಕೊನೆಗೆ ಸೌರಭ್ ಮನೆಯಿಂದ ಹೊರಹೋಗಲು ನಿರ್ಧರಿಸಿದ್ದರು. ಸೌರಭ್ ತಮ್ಮ ಪತ್ನಿ ಮುಸ್ಕಾನ್ನೊಂದಿಗೆ ಬಾಡಿಗೆ ಮನೆಯಲ್ಲಿ ತೆರಳಿದ್ದರು. 2019ರಲ್ಲಿ ಮುಸ್ಕಾನ್ ಮತ್ತು ಸೌರಭ್ಗೆ ಹೆಣ್ಣು ಮಗುವೊಂದು ಜನಿಸಿತ್ತು. ಆದರೆ ಆ ಸಂತೋಷ ಅಲ್ಪಕಾಲಿಕವಾಗಿತ್ತು.
ಮುಸ್ಕಾನ್ ತನ್ನ ಪ್ರಿಯಕರ ಸ್ನೇಹಿತ ಸಾಹಿಲ್ನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಸೌರಭ್ಗೆ ತಿಳಿಯಿತು. ಇದು ದಂಪತಿ ನಡುವೆ ಜಗಳಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಸೌರಭ್ ವಿಚ್ಛೇದನದ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಪುತ್ರಿಯ ಭವಿಷ್ಯದ ಬಗ್ಗೆ ಯೋಚಿಸಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದರು. ಮತ್ತೆ ಮರ್ಚೆಂಟ್ ನೇವಿ ಉದ್ಯೋಗಕ್ಕಾಗಿ 2023 ರಲ್ಲಿ ದೇಶ ತೊರೆದರು.
ಸೌರಭ್ ಅವರ ಪುತ್ರಿಗೆ 2025ರ ಫೆಬ್ರವರಿ 28ಕ್ಕೆ ಆರು ವರ್ಷ ತುಂಬಿತು. ಆದ್ದರಿಂದ ಸೌರಭ್ ಫೆಬ್ರವರಿ 24ರಂದು ಹುಟ್ಟುಹಬ್ಬ ಆಚರಿಸಲು ಮನೆಗೆ ಮರಳಿದ್ದರು. ಈ ಹೊತ್ತಿಗೆ, ಮುಸ್ಕಾನ್ ಮತ್ತು ಸಾಹಿಲ್ ಸೇರಿ ಸೌರಭ್ರನ್ನು ಕೊಲೆ ಮಾಡಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲೇ ಹಾಕಿಕೊಂಡ ಯೋಜನೆಯಂತೆ ಮಾರ್ಚ್ 4ರಂದು ಮುಸ್ಕಾನ್ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಸೌರಭ್ಗೆ ನೀಡಿದ್ದಳು. ಸೌರಭ್ ನಿದ್ರೆಗೆ ಜಾರಿದಾಗ ಮುಸ್ಕಾನ್ ಮತ್ತು ಸಾಹಿಲ್ ಜೊತೆಗೂಡಿ, ಸೌರಭ್ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದರು. ಬಳಿಕ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ತುಂಡುಗಳನ್ನು ಡ್ರಮ್ನಲ್ಲಿ ಹಾಕಿ ಅದಕ್ಕೆ ಸಿಮೆಂಟಿ ಹಾಕಿ ಮುಚ್ಚಿದರು. ಸಕಾಲದಲ್ಲಿ ದೇಹವನ್ನು ವಿಲೇವಾರಿ ಮಾಡುವುದು ಅವರ ಯೋಜನೆಯಾಗಿತ್ತು.
ನೆರೆಹೊರೆಯವರು ಸೌರಭ್ ಬಗ್ಗೆ ಕೇಳಿದಾಗ, ಮುಸ್ಕಾನ್ ಅವರು ಗಿರಿಧಾಮಗಳಿಗೆ ಪ್ರವಾಸ ಹೋಗಿದ್ದಾರೆ ಎಂದು ಹೇಳಿದ್ದಳು. ಆ ಬಳಿಕ ಜನರನ್ನು ದಾರಿ ತಪ್ಪಿಸಲು ಮತ್ತು ಯಾವುದೇ ರೀತಿಯ ಅನುಮಾನ ಬರದಂತಿರಲು ಮುಸ್ಕಾನ್ ಮತ್ತು ಸಾಹಿಲ್, ಸೌರಭ್ ಅವರ ಫೋನ್ನೊಂದಿಗೆ ಮನಾಲಿಗೆ ಹೋದರು. ಸೌರಭ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಫೋಟೋಗಳನ್ನು ಅಪ್ಲೋಡ್ ಮಾಡಲು ಪ್ರಾರಂಭಿಸಿದರು. ಆದರೆ ಸೌರಭ್ ಹಲವಾರು ದಿನಗಳವರೆಗೆ ಅವರ ಕುಟುಂಬ ಸದಸ್ಯರಿಂದ ಕರೆಗಳನ್ನು ಸ್ವೀಕರಿಸದಿದ್ದಾಗ, ಅವರು ಪೊಲೀಸರ ಬಳಿ ದೂರು ದಾಖಲಿಸಿದರು.
ಸೌರಭ್ ಅವರ ಕುಟುಂಬ ದೂರು ನೀಡಿದ ನಂತರ, ಪೊಲೀಸರು ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ವಶಕ್ಕೆ ಪಡೆದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಭೀಕರ ಕೊಲೆಯ ಮಾಹಿತಿ ಹೊರಬಂತು. ಶವ ಎಲ್ಲಿದೆ ಎಂದು ಕೇಳಿದಾಗ ಸಿಮೆಂಟ್ ಹಾಕಿ ಸೀಲ್ ಮಾಡಿರುವ ಡ್ರಮ್ ಮಾಹಿತಿ ಹೊರಬಂತು.
ಪೊಲೀಸರು ಡ್ರಮ್ ಅನ್ನು ವಶಪಡಿಸಿಕೊಂಡು ಸುತ್ತಿಗೆ ಮತ್ತು ಉಳಿ ಬಳಸಿ ಗಟ್ಟಿಯಾದ ಸಿಮೆಂಟ್ ಅನ್ನು ಒಡೆಯುವ ಪ್ರಯತ್ನಗಳು ವಿಫಲವಾದವು. ಸೌರಭ್ ಅವರ ದೇಹದ ತುಂಡುಗಳನ್ನು ಹೊಂದಿರುವ ಡ್ರಮ್ ಅನ್ನು ನಂತರ ಶವಾಗಾರಕ್ಕೆ ಸಾಗಿಸಲಾಯಿತು. ಕೊಲೆಯಾದ 14 ದಿನಗಳ ನಂತರ ಅವರ ಮೃತದೇಹದ ಅವಶೇಷಗಳನ್ನು ಮರುಪಡೆಯಲು ಡ್ರಿಲ್ ಯಂತ್ರವನ್ನು ಬಳಸಲಾಯಿತು.
ಪ್ರಕರಣದ ಕುರಿತು ಮಾತನಾಡಿರುವ ಮೀರತ್ ನಗರ ಪೊಲೀಸ್ ಮುಖ್ಯಸ್ಥ ಆಯುಷ್ ವಿಕ್ರಮ್ ಸಿಂಗ್, ಸೌರಭ್ ರಜಪೂತ್ ಅವರು ಹಲವು ದಿನಗಳಿಂದ ಕಾಣದಿದ್ದಾಗ ಅವರ ಕುಟುಂಬ ದೂರು ದಾಖಲಿಸಿದೆ. "ಅನುಮಾನದ ಮೇಲೆ ನಾವು ಅವರ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು. ಮಾರ್ಚ್ 4 ರಂದು ಅವರು ಸೌರಭ್ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದರು ಆರೋಪಿಗಳು. ಬಳಿಕ ಮೃತದೇಹವನ್ನು ಕತ್ತರಿಸಿ, ಡ್ರಮ್ನಲ್ಲಿ ಹಾಕಿ ಸಿಮೆಂಟ್ನಿಂದ ಮುಚ್ಚಿದ್ದಾರೆ. ಪೊಲೀಸರು ಶವವನ್ನು ವಶಪಡಿಸಿಕೊಂಡು ಶವಪರೀಕ್ಷೆಗೆ ಕಳುಹಿಸಿದ್ದಾರೆ. ನಾವು ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದು ಅವರು ಹೇಳಿದ್ದಾರೆ